ನವದೆಹಲಿ (ಪಿಟಿಐ): ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಲೋಕಸಭಾ ಸದಸ್ಯತ್ವದ ಅಮಾನತನು ಹಿಂಪಡೆಯಲು ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿಯು ಅವಿರೋಧವಾಗಿ ಬುಧವಾರ ನಿರ್ಣಯವನ್ನು ಅಂಗೀಕರಿಸಿತು.
ಚೌಧರಿ ಅವರು ಸಮಿತಿ ಎದುರು ಹಾಜರಾಗಿ ಈ ಮೊದಲು ನೀಡಿದ್ದ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ ಬಳಿಕ ಸಮಿತಿಯು ಅವರ ಅಮಾನತನ್ನು ಹಿಂಪಡೆಯುವ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ಆದಷ್ಟು ಬೇಗ ಸ್ಪೀಕರ್ಗೆ ಕಳಿಸಲಾಗುವುದು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಕಡೆಯ ದಿನವಾದ ಆಗಸ್ಟ್ 11ರಂದು ನಡೆದ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಪದೇಪದೆ ಅಶಿಸ್ತಿನ ವರ್ತನೆ ತೋರಿದ್ದರು ಎಂಬ ಕಾರಣಕ್ಕಾಗಿ ಅಧೀರ್ ರಂಜನ್ ಚೌಧರಿ ಅವರ ಲೋಕಸಭೆಯ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿತ್ತು.
ಸಹಜ ನ್ಯಾಯಿಕ ಪ್ರಕ್ರಿಯೆ ಕಾರಣಕ್ಕಾಗಿ ಸಮಿತಿ ಎದುರು ಬುಧವಾರ ಹಾಜರಾಗುವಂತೆ ಚೌಧರಿ ಅವರಿಗೆ ಹೇಳಲಾಗಿತ್ತು.