ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ಮೂವರನ್ನು ಸೇರಿಸಿಕೊಳ್ಳುವ ಮೂಲಕ ಶನಿವಾರ ಸಚಿವ ಸಂಪುಟವನ್ನು ವಿಸ್ತರಿಸಿದರು.
ಸಚಿವ ಸಂಪುಟದ ಬಲ ಈಗ 34ಕ್ಕೆ ಏರಿದೆ. ನಿಯಮಾನುಸಾರ ಇನ್ನು ಒಬ್ಬರ ಸೇರ್ಪಡೆಗೆ ಅವಕಾಶವಿದೆ. ರಾಜ್ಯಪಾಲ ಮಂಗುಭಾಯಿ ಪಟೇಲ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಮಧ್ಯಪ್ರದೇಶದಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಸಂಪುಟಕ್ಕೆ ಮೂವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಹೊಸದಾಗಿ ಸಂಪುಟ ಸೇರಿದವರಲ್ಲಿ ರಾಜೇಂದ್ರ ಶುಕ್ಲಾ ಅವರು ಬ್ರಾಹ್ಮಣರಾಗಿದ್ದರೆ, ಗೌರಿಶಂಕರ್ ಬಿಸೆನ್ ಮತ್ತು ರಾಹುಲ್ ಲೋಧಿ ಅವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.