ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ. 15ರಂದು ನಡೆಯುವ ‘ಜನ್ಜಾತಿಯ ಗೌರವ ದಿವಸ’ ಬುಡಕಟ್ಟು ಜನರ ಸಮಾವೇಶಕ್ಕೆ ಬರುವ ವಾಹನಗಳಿಗೆ ಟೋಲ್ ಶುಲ್ಕ ಸಂಗ್ರಹದಿಂದ ಮಧ್ಯಪ್ರದೇಶ ಸರ್ಕಾರ ವಿನಾಯಿತಿ ನೀಡಿದೆ.
ಭೋಪಾಲ್ನಲ್ಲಿ ನಡೆಯುವ ಸಮಾವೇಶಕ್ಕೆ ಬರುವ, ಜನರನ್ನು ಕರೆತರುವ ವಾಹನಗಳಿಗೆ ಟೋಲ್ ಶುಲ್ಕ ಇರುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.
ಜಾಂಬೂರಿ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶಕ್ಕೆ ಬುಡಕಟ್ಟು ಜನರನ್ನು ಕರೆತರುವ ಬಸ್ಗಳಲ್ಲಿ ಮಾರ್ಗಮಧ್ಯೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ತುರ್ತಾಗಿ ದುರಸ್ತಿ ಮಾಡಲು ಬಸ್ಗಳಿಗೆ ಮೆಕ್ಯಾನಿಕ್ಗಳನ್ನು ನಿಯೋಜಿಸಲಾಗಿದೆ.
ಅಲ್ಲದೆ, ದೂರದ ಊರುಗಳಿಂದ ಬರುವ ವಾಹನಗಳ ಜೊತೆಗೆ ಆಂಬುಲೆನ್ಸ್ ಕೂಡಾ ಇರುವಂತೆ ನೋಡಿಕೊಳ್ಳಬೇಕು. ಜನರನ್ನು ಕರೆತರುವ ಬಸ್ಗಳು ಸುಸ್ಥಿತಿಯಲ್ಲಿವೆ ಎಂದು ಖಾತರಿಪಡಿಸಿಕೊಳ್ಳಬೇಕು. ಚಾಲಕರ ಆರೋಗ್ಯವನ್ನು ಪರೀಕ್ಷಿಸಲು ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬುಡಕಟ್ಟು ಜನರ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನ ನಿಮಿತ್ತ ನವೆಂಬರ್ 15ಅನ್ನು ‘ಜನ್ಜಾತಿಯ ಗೌರವ್ ದಿವಸ್’ ಎಂದು ಆಚರಿಸಲಾಗುವುದು ಎಂದು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯು ತೀರ್ಮಾನಿಸಿತ್ತು.
ಬಿಜೆಪಿ ಮೂಲಗಳ ಪ್ರಕಾರ, ಸಮಾವೇಶದಲ್ಲಿ ಸುಮಾರು 2.5 ಲಕ್ಷ ಬುಡಕಟ್ಟು ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಮಾವೇಶ ಆಯೋಜನೆಗೆ ಎಷ್ಟು ಹಣ ವ್ಯಯ ಮಾಡಲಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಮೌನ ತಳೆದಿದೆ.
ಆದರೆ, ಕಾಂಗ್ರೆಸ್ ಶಾಸಕ, ಬುಡಕಟ್ಟು ಜನರ ನಾಯಕ ಹಿರಾಲಾಲ್ ಅಲವಾ ಈಚೆಗೆ, ಸಮಾವೇಶಕ್ಕಾಗಿ ಮುಖ್ಯಮಂತ್ರಿ ಅವರು ಆದಿವಾಸಿಗಳ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿಗೆ ನಿಗದಿಪಡಿಸಲಾಗಿದ್ದ ಮೊತ್ತವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.