ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಕರವಿಳಕ್ಕು ಆಚರಣೆ
Published 15 ಜನವರಿ 2024, 16:27 IST
Last Updated 15 ಜನವರಿ 2024, 16:27 IST
ಅಕ್ಷರ ಗಾತ್ರ

ಪತ್ತನಂತಿಟ್ಟ (ಕೇರಳ): ಮಕರವಿಳಕ್ಕು ಆಚರಣೆಯ (ಮಕರ ಸಂಕ್ರಾಂತಿ) ದಿನದಂದು ಸೋಮವಾರ ಇಲ್ಲಿನ ಅಯ್ಯಪ್ಪನ ಬೆಟ್ಟದ ದೇಗುಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿ ಭಕ್ತರು ಹಲವಾರು ತಾಸು ಬೃಹತ್ ಸರತಿ ಸಾಲಿನಲ್ಲಿ ನಿಂತು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. 

ಸಾಂಪ್ರದಾಯಿಕ ಕಪ್ಪು ಬಟ್ಟೆ ಧರಿಸಿ, ತಲೆಯ ಮೇಲೆ ಇರುಮುಡಿ ಕಟ್ಟು (ಭಕ್ತರು ದೇಗುಲಕ್ಕೆ ತರುವ ಸಾಂಪ್ರದಾಯಿಕ ಹರಕೆಯ ಕಟ್ಟು) ಹೊತ್ತು ಬಂದಿದ್ದ ವ್ರತಧಾರಿ ಭಕ್ತರ ದಂಡು ದೀಪಾರಾಧನೆಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಿಗ್ಗೆಯಿಂದಲೇ ಕಾಯುತ್ತಿತ್ತು. ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ಆರಂಭವಾದ ವಿಧ್ಯುಕ್ತ ಮೆರವಣಿಗೆಯಲ್ಲಿ ದೀಪರಾಧನೆಗೆ ಕೆಲವೇ ಕ್ಷಣಗಳ ಮೊದಲು ತಿರುವಾಭರಣ (ಪವಿತ್ರ ಆಭರಣ)ಗಳನ್ನು ಇಲ್ಲಿಗೆ ತರಲಾಯಿತು. ಸಂಜೆ 6.45ರ ಸುಮಾರಿಗೆ ಅಯ್ಯಪ್ಪ ದೇವರ ಮೂರ್ತಿಯನ್ನು ಆಭರಣಗಳಿಂದ ಅಲಂಕರಿಸಿ, ದೀಪಾರಾಧನೆ ನಂತರ (ಆರತಿ) ದೇಗುಲದ ಬಾಗಿಲನ್ನು ಭಕ್ತರ ದರ್ಶನಕ್ಕೆ ತೆರೆಯಲಾಯಿತು. ಪುರಾಣದ ಪ್ರಕಾರ, ಅಯ್ಯಸ್ವಾಮಿ ಜನಿಸಿದ ಮತ್ತು ಬಾಲ್ಯ ಕಳೆದ ಪಂದಳಂ ಅರಮನೆಯಿಂದ ತಿರುವಾಭರಣವನ್ನು ತಂದು, ದೀಪಾರಾಧನೆಗೂ ಮುನ್ನ ಮೂರ್ತಿ ಅಲಂಕರಿಸಲಾಗುತ್ತದೆ. 

ಆಭರಣ ಅಲಂಕೃತ ಅಯ್ಯಪ್ಪ ಸ್ವಾಮಿಯನ್ನು ಕಣ್ತುಂಬಿಕೊಳ್ಳುವ ಕ್ಷಣಕ್ಕಾಗಿ ದೇಗುಲದ ಹೊರಗೆ ಅಪಾರಸಂಖ್ಯೆಯಲ್ಲಿ ಭಕ್ತರು ಮೂರ್ತಿಯತ್ತ ನೋಡುತ್ತಾ ನಿಂತಿದ್ದರು. ದೇಗುಲದ ಹೆಬ್ಬಾಗಿಲು ತೆರೆದಾಗ ಭಕ್ತಗಣದಿಂದ ‘ಶರಣಂ ಅಯ್ಯಪ್ಪ’ ಘೋಷಣೆ, ಅಯ್ಯಪ್ಪನ ಕುರಿತ ಕೀರ್ತನೆಗಳು ಮುಗಿಲುಮುಟ್ಟಿದವು.

ದೀಪಾರಾಧನೆಯ ಕೆಲವು ನಿಮಿಷಗಳ ನಂತರ, ದೇವಾಲಯದ ಸಂಕೀರ್ಣದಿಂದ ಎಂಟು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪೊನ್ನಂಬಲಮೇಡುವಿನ ಪೂರ್ವ ದಿಗಂತದಲ್ಲಿ, ಭಕ್ತರು ದೈವಿಕ ಜ್ಯೋತಿ ಎಂದೇ ಭಾವಿಸಿರುವ ‘ಮಕರ ಜ್ಯೋತಿ’ ಮಿನುಗಿದಾಗ ‘ಶರಣಂ ಅಯ್ಯಪ್ಪ’ ಘೋಷಣೆಗಳು ಮತ್ತಷ್ಟು ಮಾರ್ಧನಿಸಿದವು. 

ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಪುಲ್ಲುಮೇಡು, ಪಾಂಚಾಲಿಮೇಡು, ಪರುಂತುಂಪಾರ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT