ಪುಣೆ: ವ್ಯಕ್ತಿಯೊಬ್ಬರ ಮೇಲೆ ಕಾರು ನುಗ್ಗಿಸಿ ಸಾಯಿಸಲು ಯತ್ನಿಸಿದವನನ್ನು ಪುಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತನನ್ನು ಸುಶೀಲ್ ಕಾಳೆ ಎಂದು ಗುರುತಿಸಲಾಗಿದ್ದು, ಈತನನ್ನು ಸದ್ಯ ಕೊಲೆ ಯತ್ನ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳವಾರ ನಸುಕಿನ ಜಾವ ಪಿಂಪ್ರಿ ಪ್ರದೇಶದಲ್ಲಿ ತನ್ನ ಮಾಜಿ ಗೆಳತಿಯೊಂದಿಗೆ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದನ್ನು ಸುಶೀಲ್ ಕಾಳೆ ನೋಡಿದ್ದಾರೆ. ಈ ವೇಳೆ ಆತನ ಜೊತೆ ಜಗಳ ತೆಗೆದಿದ್ದ ಕಾಳೆ, ಕೋಪದಲ್ಲಿ ವ್ಯಕ್ತಿ ಕುಳಿತಿದ್ದ ಸ್ಕೂಟರ್ ಮೇಲೆ ಕಾರು ನುಗ್ಗಿಸಿ ಸಾಯಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ವ್ಯಕ್ತಿ ರಸ್ತೆ ಪಕ್ಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅಲ್ಲದೇ ಕಾಳೆ ತನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಸಂತ್ರಸ್ತ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುರಕ್ಷತೆ ದೃಷ್ಟಿಯಿಂದ ಆತನ ಹೆಸರು ಬಹಿರಂಗಪಡಿಸಿಲ್ಲ ಎಂದು ಪಿಂಪ್ರಿ ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಪೋಶೆ ಐಷಾರಾಮಿ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕ ಇಬ್ಬರ ಸಾವಿಗೆ ಕಾರಣವಾದ ಬೆನ್ನಲ್ಲೇ ಈ ಘಟನೆ ನಡೆದಿದೆ.