ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬಿರುಗಾಳಿ ಎಬ್ಬಿಸಿದ ದಯಾನಿಧಿ ಮಾರನ್‌ ಹಳೆ ಭಾಷಣ

Published 24 ಡಿಸೆಂಬರ್ 2023, 16:21 IST
Last Updated 24 ಡಿಸೆಂಬರ್ 2023, 16:21 IST
ಅಕ್ಷರ ಗಾತ್ರ

ಚೆನ್ನೈ: ಬಿಹಾರ ಮತ್ತು ಉತ್ತರ‍ಪ್ರದೇಶದ ಜನರನ್ನು ಹೀಯಾಳಿಸಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು 2019ರಲ್ಲಿ ಮಾಡಿರುವ ಭಾಷಣವೊಂದು ಈಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

‘ಕೇವಲ ಹಿಂದಿ ಮಾತನಾಡುವ  ಉತ್ತರಪ್ರದೇಶ ಮತ್ತು ಬಿಹಾರದ ಜನರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯುವ ಮತ್ತು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ, ಇಲ್ಲಿನ ಯುವಜನರು ಇಂಗ್ಲಿಷ್‌ ಪ್ರೌಢಿಮೆಯಿಂದ  ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸದ ದಯಾನಿಧಿ ಮಾರನ್‌ ಅವರು ಹೇಳಿರುವ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಬಿಜೆಪಿ ಮಾತ್ರವಲ್ಲ, ‘ಇಂಡಿಯಾ’ ಮೈತ್ರಿಕೂಟದ ಭಾಗವೂ ಆಗಿರುವ ಬಿಹಾರದ ಆಡಳಿತಾರೂಢ ಪಕ್ಷ ಆರ್‌ಜೆಡಿ, ಮಾರನ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ‘ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ನಾಯಕರೊಬ್ಬರು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ದಯಾನಿಧಿ ಮಾರನ್‌ ಅವರಿಗೆ ಉಭಯ ಪಕ್ಷಗಳ ನಾಯಕರು ತಿರುಗೇಟು ನೀಡಿದ್ದಾರೆ. 

ಬಿಹಾರ ಮತ್ತು ಉತ್ತರ ಪ್ರದೇಶದ ಜನರನ್ನು ಅವಮಾನಿಸಿದ್ದಕ್ಕಾಗಿ ಇಂಡಿಯಾ ಮೈತ್ರಿಕೂಟದಿಂದ ಡಿಎಂಕೆ ಪಕ್ಷವನ್ನು ಜೆಡಿಯು ಮತ್ತು ಆರ್‌ಜೆಡಿ ತಕ್ಷಣವೇ ಹೊರಹಾಕಲಿ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡ ಶಾನವಾಜ್‌ ಹುಸೇನ್‌ ಅವರು, ‘ಉತ್ತರದ ರಾಜ್ಯಗಳ ಬಗ್ಗೆ ತುಚ್ಛವಾಗಿ ಮಾತನಾಡುವುದು ವಿರೋಧ ಪಕ್ಷದ ನಾಯಕರಿಗೆ ಅಭ್ಯಾಸವಾಗಿದೆ’ ಎಂದು ಕಿಡಿಕಾರಿದ್ದಾರೆ.

ಆರ್‌ಜೆಡಿ ನಾಯಕ ಮತ್ತು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ‘ಮಾರನ್ ಅವರು ಜಾತಿ ಪದ್ಧತಿಯಿಂದಾಗಿ ತುಂಬಿರುವ ಅನ್ಯಾಯಗಳನ್ನು ಮತ್ತು ಕೆಲವು ಸಮುದಾಯದ  ಜನರನ್ನು ಮಾತ್ರ ಇಂತಹ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿರುವುದನ್ನು  ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದರೆ ಅದು ಅರ್ಥಪೂರ್ಣ. ಆದರೆ, ಬಿಹಾರ ಮತ್ತು ಉತ್ತರಪ್ರದೇಶದ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.  

‘ದೇಶದ ಯಾವುದೇ ಭಾಗದಿಂದ ಬರುವ ಜನರನ್ನು ನಾವು ಗೌರವಿಸಬೇಕು. ನಾವು ಡಿಎಂಕೆಯನ್ನು ನಮ್ಮಂತೆಯೇ ಸಾಮಾಜಿಕ ನ್ಯಾಯದ ಆದರ್ಶ ಪಾಲಿಸುವ ಪಕ್ಷವಾಗಿ ನೋಡುತ್ತೇವೆ. ಆ ಪಕ್ಷದ ನಾಯಕರು ಈ ಆದರ್ಶಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಯಾದವ್ ಹೇಳಿದರು.

ಮಾರನ್ ಅವರು 2019ರ ಜೂನ್‌ನಲ್ಲಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ 96ನೇ ಜನ್ಮದಿನ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಈ ಭಾಷಣ ಮಾಡಿದ್ದರು.

ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಅವರು ಈ ವಿಡಿಯೊ ಕ್ಲಿಪ್‌ ಅನ್ನು ಶನಿವಾರ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು. 10 ನಿಮಿಷ 24 ಸೆಕೆಂಡುಗಳ ಈ ಭಾಷಣದ ವಿಡಿಯೊ ಕ್ಲಿಪ್‌ ‘ಪ್ರಜಾವಾಣಿ’ಗೆ ಲಭಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT