ರಾಂಚಿ : ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
ಅಫ್ಸರ್ ಅಲಿ ಬಂಧಿತ. ಹಣ ಅಕ್ರಮ ವರ್ಗಾವಣೆಯ ಇನ್ನೊಂದು ಪ್ರಕರಣದಡಿ ಈತ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿದ್ದ. ಕೋರ್ಟ್ ಅನುಮತಿ ಪಡೆದು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.
ಜಾರ್ಖಂಡ್ನಲ್ಲಿ ಭೂಮಿ ಕಬಳಿಸಲು ದಾಖಲೆಗಳನ್ನು ತಿರುಚಿದ್ದ ಆರೋಪವು ಈತನ ಮೇಲಿದೆ. ಹೇಮಂತ್ ಸೊರೇನ್ ಮತ್ತು ಕಂದಾಯ ಇಲಾಖೆಯ ಮಾಜಿ ಸಬ್ ಇನ್ಸ್ಪೆಕ್ಟರ್ ಭಾನು ಪ್ರತಾಪ್ ಪ್ರಸಾದ್ ಈ ಪ್ರಕರಣದ ಇತರೆ ಆರೋಪಿಗಳು.
ಪ್ರಕರಣದ ಸಂಬಂಧ ಬಂಧಿಸಲಾದ ನಾಲ್ಕನೇ ಆರೋಪಿ ಈತನಾಗಿದ್ದಾನೆ. ಅಲ್ಲದೆ, ಇದೇ ಪ್ರಕರಣದಲ್ಲಿ ಸಂಪರ್ಕವಿದೆ ಎನ್ನಲಾದ ಅಂತು ಟಿರ್ಕೆ ಅವರಿಗೆ ಸೇರಿದ್ದ ತಾಣಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿಂದೆಯೇ ಈ ಪ್ರಕರಣ ಸಂಬಂಧ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಇ.ಡಿ ಜನವರಿ ತಿಂಗಳಲ್ಲಿ ಬಂಧಿಸಿತ್ತು. ಸದ್ಯ ಅವರು ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.
ರಾಂಚಿಯಲ್ಲಿ ಸುಮಾರು 8.86 ಎಕರೆ ಭೂಮಿಯನ್ನು ಅಕ್ರಮವಾಗಿ ಸುಪರ್ದಿಗೆ ತೆಗೆದುಕೊಂಡ ಆರೋಪ ಹೇಮಂತ್ ಮೇಲಿದ್ದು, ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.