ಬಹುತೇಕ ವಿಚ್ಛೇದನಗಳು ಪ್ರೇಮ ವಿವಾಹಗಳಲ್ಲಿಯೇ ಉಂಟಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವೈವಾಹಿಕ ವಿವಾದಕ್ಕೆ ಸಂಬಂಧಪಟ್ಟ ವರ್ಗಾವಣೆಗೊಂಡ ಅರ್ಜಿಯನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಅರ್ಜಿಯು ‘ಪ್ರೇಮ ವಿವಾಹ‘ಕ್ಕೆ ಸಂಬಂಧಪಟ್ಟಿದೆ ಎಂದು ವಕೀಲರು ಪೀಠಕ್ಕೆ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಬಿ. ಆರ್. ಗವಾಯಿ, ‘ಹೆಚ್ಚಿನ ವಿಚ್ಛೇದನಗಳು ಪ್ರೇಮ ವಿವಾಹಗಳಿಂದಲೇ ಉಂಟಾಗುತ್ತಿವೆ’ ಎಂದು ಅಭಿಪ್ರಾಯಪಟ್ಟರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದಂಪತಿಗೆ ಮಧ್ಯಸ್ಥಿಕೆ ಪಡೆಯುವ ವಿಚಾರವನ್ನು ಪ್ರಸ್ತಾಪಿಸಿದೆ. ಇದಕ್ಕೆ ಪತಿಯ ಕಡೆಯಿಂದ ಒಪ್ಪಿಗೆಯಿಲ್ಲದನ್ನು ಅರಿತ ಪೀಠವು, ಪತಿಯ ಒಪ್ಪಿಗೆಯಿಲ್ಲದೆ ವಿಚ್ಛೇದನವನ್ನು ನೀಡಬಹುದು ಎಂಬ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿದೆ.