ಭುವನೇಶ್ವರ: ಒಡಿಶಾದ ಝಾರ್ಸುಗುಡ ಜಿಲ್ಲೆಯ ಮಹಾನದಿಯಲ್ಲಿ ದೋಣಿ ಮಗುಚಿಬಿದ್ದು, 8 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದು, ಇಬ್ಬರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ. ‘ಇಬ್ಬರು ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ’ ಎಂದು ಝಾರ್ಸುಗುಡ ಎಸ್.ಪಿ ತಿಳಿಸಿದ್ದಾರೆ.
ನಿಯಮಗಳನ್ನು ಅನುಸರಣೆಯ ನಂತರ ಘಟನೆಯಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಗಾಯಾಳುಗಳನ್ನು ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಮುಳುಗಡೆಯಾದ ದೋಣಿಯು ನೋಂದಣಿಯಾಗಿರಲಿಲ್ಲ ಮತ್ತು ಅದು ಕಾರ್ಯಾಚರಣೆಗೆ ಅನರ್ಹವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ಝಾರ್ಸುಗುಡ ಜಿಲ್ಲೆಯ ಮೋಟರು ವಾಹನ ನಿರೀಕ್ಷಕ ಲೋಕನಾಥ್ ಮೆಹರ್ ತಿಳಿಸಿದ್ದಾರೆ.
ಅಲ್ಲದೇ ದೋಣಿಯಲ್ಲಿ ಲೈಫ್ ಜಾಕೆಟ್ (ಜೀವ ರಕ್ಷಕ ಕವಚ)ಗಳೂ ಇರಲಿಲ್ಲ ಎಂದಿದ್ದಾರೆ. ದೋಣಿಯು ಕೇವಲ 20 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದರೂ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯಲಾಗಿತ್ತು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು ಎಂದು ಹೇಳಿದರು.