ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

‘ರಾಜ್ಯಸಭೆಗೆ ಹೋಗಬೇಕು ಅನ್ನಿಸಿದಾಗ ಹೋಗುತ್ತೇನೆ’ ಎಂದಿದ್ದ ನಿವೃತ್ತ ನ್ಯಾಯಮೂರ್ತಿ
Last Updated 13 ಡಿಸೆಂಬರ್ 2021, 21:44 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯಸಭೆಗೆ ಹೋಗಬೇಕು ಎಂದು ನನಗೆ ಅನ್ನಿಸಿದಾಗ, ನಾನು ಹೋಗುತ್ತೇನೆ’ ಎಂದು ಹೇಳಿದ್ದ ರಾಜ್ಯಸಭಾ ಸದಸ್ಯ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ರಾಜ್ಯಸಭೆಯಲ್ಲಿ, ಕಾಂಗ್ರೆಸ್‌ ಮತ್ತು ಟಿಎಂಸಿ ಸಂಸದರು ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ. ‘ಗೊಗೊಯಿ ಅವರ ಹೇಳಿಕೆಯು ರಾಜ್ಯಸಭೆಯ ಘನತೆಗೆ ಧಕ್ಕೆ ತಂದಿದೆ’ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಟಿಎಂಸಿಯ ಮೌಸಮ್ ನೂರ್ ಮತ್ತು ಜವಾಹರ್ ಸರ್ಕಾರ್, ಕಾಂಗ್ರೆಸ್‌ನ ಹಲವು ಸದಸ್ಯರು ನೋಟಿಸ್ ನೀಡಿದ್ದಾರೆ. ಮೌಸಮ್ ನೂರ್ ಅವರು ಗೊಗೊಯಿ ವಿರುದ್ಧ ರಾಜ್ಯಸಭೆಯ ನೈತಿಕ ಸಮಿತಿಗೂ ಪತ್ರ ಬರೆದಿದ್ದಾರೆ.

ರಂಜನ್ ಗೊಗೊಯಿ ಅವರು ತಾವು ರಚಿಸಿರುವ, ‘ಜಸ್ಟೀಸ್ ಫಾರ್ ಜಡ್ಜ್‌’ ಪುಸ್ತಕದ ಪ್ರಚಾರದ ಸಲುವಾಗಿ ಎನ್‌ಡಿ ಟಿ.ವಿ.ಗೆ ಈಚೆಗೆ ಸಂದರ್ಶನ ನೀಡಿದ್ದರು. 2020ರ ಮಾರ್ಚ್‌ನಲ್ಲಿ ಗೊಗೊಯಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಅಂದಿನಿಂದ ರಾಜ್ಯಸಭೆಯಲ್ಲಿ ಅವರ ಹಾಜರಾತಿ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ. ಹಾಜರಾತಿ ಕಡಿಮೆ ಇರುವ ಬಗ್ಗೆ ಸಂದರ್ಶನದಲ್ಲಿ ಪ್ರಶ್ನಿಸಲಾಗಿತ್ತು.

ಆಗ ಅವರು,‘ರಾಜ್ಯಸಭೆಗೆ ಹೋಗಬೇಕು ಎಂದು ನನಗೆ ಅನ್ನಿಸಿದಾಗ ಮತ್ತು ನಾನು ಮಾತನಾಡಬಹುದಾದ ಮಹತ್ವದ ವಿಚಾರಗಳು ಇವೆ ಅನ್ನಿಸಿದಾಗ, ನಾನು ಹೋಗುತ್ತೇನೆ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ಸಚೇತಕರ ಉಸ್ತುವಾರಿಯಲ್ಲಿಲ್ಲ. ಕರೆ ಬಂದಾಗಲೆಲ್ಲಾ ಅವರು ಹಾಜರಾಗಬೇಕು. ಆದರೆ ಅದು ನನಗೆ ಅನ್ವಯವಾಗುವುದಿಲ್ಲ. ರಾಜ್ಯಸಭೆಗೆ ಹೋಗುವುದೂ ನನ್ನ ಆಯ್ಕೆ, ಹೊರಗೆ ಬರುವುದೂ ನನ್ನದೇ ಆಯ್ಕೆ. ನಾನು ಸದನದ ಸ್ವತಂತ್ರ ಸದಸ್ಯ’ ಎಂದು ಅವರು ಹೇಳಿದ್ದರು.

‘ಕೋವಿಡ್‌ನ ಕಾರಣದಿಂದ ರಾಜ್ಯಸಭೆಗೆ ಬರಲು ಸಾಧ್ಯವಿಲ್ಲ ಎಂದು ಹಲವು ಬಾರಿ ಪತ್ರ ನೀಡಿದ್ದೇನೆ. ರಾಜ್ಯಸಭೆಗೆ ಪ್ರವೇಶಿಸಲು ಆರ್‌ಟಿ–ಪಿಸಿಆರ್‌ ಫಲಿತಾಂಶದ ಪ್ರಮಾಣಪತ್ರ ನೀಡಬೇಕಿತ್ತು. ಅದು ನನಗೆ ಹಿತಕರವೆನಿಸುತ್ತಿರಲಿಲ್ಲ. ಸದನದೊಳಗೆ ಕುಳಿತುಕೊಳ್ಳಲು ಮಾಡಿದ್ದ ವ್ಯವಸ್ಥೆಯೂ ಹಿತಕರವಾಗಿರಲಿಲ್ಲ. ಅಂತರ ಕಾಯ್ದುಕೊಳ್ಳುವುದನ್ನು ಸದನದ ಒಳಗೆ ಪಾಲಿಸುತ್ತಿರಲಿಲ್ಲ’ ಎಂದು ಅವರು ಹೇಳಿದ್ದರು.

ಸೋಮವಾರ ಅವರು ಸದನಕ್ಕೆ ಹಾಜರಾಗಿದ್ದರು. ಸೋಮವಾರದ ಹಾಜರಿಯೂ ಸೇರಿ ಅವರು ಈವರೆಗೆ ಏಳು ಬಾರಿ ಮಾತ್ರ ಸದನದಲ್ಲಿ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT