ನವದೆಹಲಿ: ‘ಪಬುಕ್’ ಚಂಡಮಾರುತ ಎದುರಿಸಲು ಕೇಂದ್ರ ಸರ್ಕಾರಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹಕ್ಕೆ ‘ಆರೆಂಜ್ ಅಲರ್ಟ್’ ನೀಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಆರೆಂಜ್ ಅಲರ್ಟ್ ಎಂದರೆ, ‘ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ. ಸ್ವತ್ತು, ಜೀವಹಾನಿ ಉಂಟಾಗಬಹುದು. ರಸ್ತೆ ಮತ್ತು ವಾಯುಮಾರ್ಗ ಸಂಚಾರ ವ್ಯವಸ್ಥೆ ಏರುಪೇರಾಗಬಹುದು. ಪರಿಸ್ಥಿತಿ ಎದುರಿಸಲು ಜನರು ಸಿದ್ಧರಾಗಿರಬೇಕು’ ಎಂದರ್ಥ.
‘ಪ್ರಸ್ತುತ ಅಂಡಮಾನ್ ಸಮುದ್ರ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಚಂಡಮಾರುತ ಬೀಸುತ್ತಿದ್ದು, ಉತ್ತರ ಮತ್ತು ವಾಯವ್ಯ ದಿಕ್ಕಿನತ್ತ ಸಾಗುವ ಸಂಭವ ಇದೆ. ಬಳಿಕ ಈಶಾನ್ಯ ದಿಕ್ಕಿನತ್ತ ತಿರುಗಿ ಮ್ಯಾನ್ಮಾರ್ ಕರಾವಳಿ ಪ್ರವೇಶಿಸಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.