ನವದೆಹಲಿ: ‘ಭಾರತದ ಬಗ್ಗೆ ಕೆಟ್ಟದ್ದಾಗಿ ಮತ್ತು ನಕಾರಾತ್ಮಕವಾಗಿ ಬಿಂಬಿಸುವ ದೇಶದ್ರೋಹಿಗಳನ್ನು ಎದುರಿಸಲು ಸಂಶೋಧನಾ ವಿದ್ವಾಂಸರು ಮುಂಚೂಣಿಯಲ್ಲಿರಬೇಕು’ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬುಧವಾರ ಇಲ್ಲಿ ಹೇಳಿದರು.
‘ವಿನಾಶಕಾರಿ ಕಾರ್ಯಸೂಚಿ ಹೊಂದಿರುವವರಿಗೆ ಇಲ್ಲಿ ಕೆಲಸ ಮಾಡಲು ಆಗದಿದ್ದರೆ, ಯುರೋಪ್ಗೆ ಹೋಗಬಹುದು. ಯಾವಾಗಲೂ ಇಂತಹ ಅವಕಾಶಗಳನ್ನು ಪಡೆಯುವವರು ಇರುತ್ತಾರೆ’ ಎಂದು ಯುರೋಪ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆ, ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
‘ಭಾರತದ ಅಭಿವೃದ್ಧಿಯನ್ನು ನೋಡಿದಾಗ ಕೆಲವರು ಅಜೀರ್ಣರಾದವರಂತೆ ನಡೆದುಕೊಳ್ಳುತ್ತಾರೆ’ ಎಂದು ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ನ (ಐಸಿಡಬ್ಲ್ಯುಎ) ನವೀಕೃತ ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಐಸಿಡಬ್ಲ್ಯುಎಯ ಸಂಶೋಧನಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ‘ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇದು ಜಾಗತಿಕ ಒಮ್ಮತಕ್ಕೆ ಕಾರಣವಾಗಿದೆ. ಪುನರುತ್ಥಾನವಾದ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿತು. ಇದಕ್ಕೆ ಕಾನೂನು ಮಾನ್ಯತೆಯೂ ಸಿಕ್ಕಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.