ನವದೆಹಲಿ: ಯುದ್ಧಪೀಡಿತ ಉಕ್ರೇನ್ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ನಡೆಸಲಾಗುತ್ತಿರುವ ಕಾರ್ಯಾಚರಣೆಗೆ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಆಪರೇಷನ್ ಗಂಗಾ’ ಹೆಸರಿನಲ್ಲಿ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ನೆರೆ ದೇಶಗಳಾದ ಪೋಲೆಂಡ್, ರುಮೇನಿಯಾ, ಸ್ಲೊವಾಕಿಯಾ, ಹಂಗೆರಿ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈವರೆಗೆ 7 ವಿಮಾನಗಳ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಗಿದೆ.
ಸ್ಪೈಸ್ಜೆಟ್, ಇಂಡಿಗೊ, ಏರ್ ಇಂಡಿಯಾ ಎಕ್ಸ್ಪ್ರೆಸ್ಗಳು ರುಮೇನಿಯಾ, ಹಂಗೆರಿಗಳಿಗೆ ವಿಶೇಷ ವಿಮಾನಗಳನ್ನು ಕಳುಹಿಸಲಿವೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ರುಮೇನಿಯಾದ ಬುಕಾರೆಸ್ಟ್ ಹಾಗೂ ಹಂಗೆರಿಯ ಬುಡಾಪೆಸ್ಟ್ಗಳಿಂದ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ.