ನವದೆಹಲಿ: ಗುರುವಾರ ಸಂಸತ್ನ ನೂತನ ಕಟ್ಟಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿರುವ ಮೋದಿ, ದೇಶ ಮೊದಲು ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಯೇ ಪರಮೋಚ್ಛ ಧ್ಯೇಯವಾಗಿರಬೇಕು ಎಂದು ಕರೆ ನೀಡಿದರು.
ನಾವು 'ದೇಶ ಮೊದಲು' ಎಂಬ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಮ್ಮ ನಿರ್ಣಯಗಳು ರಾಷ್ಟ್ರವನ್ನು ಬಲಿಷ್ಠಗೊಳಿಸಬೇಕು ಮತ್ತು ಅದೇ ಪ್ರಮಾಣದಲ್ಲಿ ಅಳೆಯಬೇಕು, ರಾಷ್ಟ್ರದ ಕಲ್ಯಾಣ ಮೊದಲ ಆದ್ಯತೆಯಾಗಿರಬೇಕು. ಮುಂದಿನ 25ರಿಂದ 26 ವರ್ಷಗಳಲ್ಲಿ ನಮ್ಮ ಪ್ರಯತ್ನಗಳು ಸ್ವಾತಂತ್ರ್ಯ ನಂತರದ 100 ವರ್ಷಗಳಲ್ಲಿ 2047ರಲ್ಲಿ ಭಾರತವನ್ನು ಹೇಗೆ ನೋಡಬಯಸುತ್ತೇವೆ ಎಂಬುದಾಗಿರಬೇಕು ಎಂದು ನುಡಿದರು.
'ನಾವು ಭಾರತೀಯ ಪ್ರಜೆಗಳು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ರಾಷ್ಟ್ರೀಯ ಹಿತಾಸಕ್ತಿಗಿಂತ ಮಿಗಿಲಾಗಿ ಇನ್ನೊಂದಿಲ್ಲ. ದೇಶದ ಕಾಳಜಿಯು ನಮ್ಮ ಸ್ವಂತ ಕಾಳಜಿಗಿಂತ ಹೆಚ್ಚಾಗಿರುತ್ತದೆ. ದೇಶದ ಏಕತೆ ಹಾಗೂ ಸಮಗ್ರತೆಗಿಂತ ಬೇರೆ ಯಾವುದು ನಮಗೆ ಮುಖ್ಯವಾಗುವುದಿಲ್ಲ. ನಮಗೆ ದೇಶದ ಸಂವಿಧಾನದ ಘನತೆ ಹಾಗೂ ನೆರವೇರಿಕೆಯು ಜೀವನದ ದೊಡ್ಡ ಗುರಿಯಾಗಿದೆ' ಎಂದವರು ಕರೆ ನೀಡಿದರು.
Speaking at the Foundation Stone Laying of the New Parliament. https://t.co/Gh3EYXlUap
— Narendra Modi (@narendramodi) December 10, 2020
ಭಿನ್ನಾಭಿಪ್ರಾಯಗಳಿದ್ದರೂ ಉತ್ತಮ ಆಡಳಿತದ ಜೊತೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಮಸ್ಯೆಯನ್ನು ಬಗೆ ಹರಿಸುವ ಸಾಧನವಾಗಿದೆ ಎಂದು ನರೇಂದ್ರ ಮೋದಿ ಮೆಲುಕು ಹಾಕಿದರು. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ-ಹರಿಯಾಣ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿ ಮೋದಿ ಪರೋಕ್ಷವಾಗಿ ಈ ಮಾತುಗಳನ್ನು ಆಡಿದರು.
'ವಿಭಿನ್ನ ಅಭಿಪ್ರಾಯ, ವಿಭಿನ್ನ ದೃಷ್ಟಿಕೋನಗಳಿರಬಹುದು. ಅವುಗಳು ಶಕ್ತಿಶಾಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುತ್ತದೆ. ಯಾವಾಗಲೂ ಭಿನ್ನಭಿಪ್ರಾಯಗಳಿಗೆ ಅವಕಾಶವಿದೆ. ಆದರೆ ಎಂದಿಗೂ ಸಂಪರ್ಕ ಕಡಿತಗೊಂಡಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಈ ಗುರಿಯೊಂದಿಗೆ ಮುಂದೆ ಸಾಗಿದೆ' ಎಂದು ವಿವರಿಸಿದರು.
'ರಾಜಕಾರಣ ಹಾಗೂ ನೀತಿಗಳ ಬಗ್ಗೆ ವ್ಯತ್ಯಾಸಗಳಿರಬಹುದು. ಆದರೆ ನಮ್ಮ ಸಾರ್ವಜನಿಕರ ಸೇವೆಯಲ್ಲಿ ಈ ಮಹೋನ್ನತ ಗುರಿಯಲ್ಲಿ ಯಾವುದೇ ವ್ಯತ್ಯಾಸಗಳು ಇರಬಾರದು' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.