ಸಿಲ್ಚರ್ (ಅಸ್ಸಾಂ): ಸಂವಿಧಾನ ನಾಶಪಡಿಸಲು ಈಗಿನ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಉತ್ತರ ಪ್ರದೇಶದ ಪೂರ್ವಭಾಗದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಅವರು ತಮ್ಮ ಪ್ರಚಾರವನ್ನು ಅಸ್ಸಾಂಗೂ ವಿಸ್ತರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸುಶ್ಮಿತಾ ದೇವ್ ಪರವಾಗಿ ಅವರು ಭಾನುವಾರ ರೋಡ್ಶೋ ನಡೆಸಿದರು.
‘ಇಂದು ಮಹಾಪುರುಷ ಅಂಬೇಡ್ಕರ್ ಅವರ ಜನ್ಮದಿನ. ಸಂವಿಧಾನದ ಮುಖಾಂತರ ಅವರು ದೇಶಕ್ಕೆ ಭದ್ರ ಅಡಿಪಾಯ ಹಾಕಿದರು. ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಆದರೆ ಈಗ ಸಂವಿಧಾನಕ್ಕೆ ಅಪಮಾನ ಮಾಡುವ, ಅದನ್ನು ನಾಶಪಡಿಸುವ ಯತ್ನಗಳು ಆಗುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.
ಜಗತನ್ನು ಸುತ್ತುವ ಮೋದಿ ಅವರಿಗೆ ತಮ್ಮ ಕ್ಷೇತ್ರ ವಾರಾಣಸಿಯಲ್ಲಿ ಐದು ನಿಮಿಷ ಕಳೆಯಲು ಪುರುಸೊತ್ತು ಇಲ್ಲ ಎಂದಿರುವ ಅವರು, ಬಿಜೆಪಿ ಪ್ರಣಾಳಿಕೆಯನ್ನೂ ಟೀಕಿಸಿದ್ದಾರೆ.
* ಅಮೆರಿಕಕ್ಕೆ ಹೋದ ಅವರು ಅಧ್ಯಕ್ಷರನ್ನು ಅಪ್ಪಿಕೊಂಡರು. ಆಫ್ರಿಕಾ, ರಷ್ಯಾ, ಚೀನಾದಲ್ಲೂ ಹಾಗೆಯೇ ಮಾಡಿದರು. ಜಪಾನ್ಗೆ ಹೋದಾಗ ಡ್ರಮ್ ಬಾರಿಸಿದರು. ಪಾಕಿಸ್ತಾನದಲ್ಲಿ ಬಿರಿಯಾನಿ ಸೇವಿಸಿ ಬಂದರು. ತಮ್ಮ ಕ್ಷೇತ್ರದ ಯಾವುದಾದರೊಂದು ಮನೆಗೆ ಹೋಗಿ ಅವರ ಸ್ಥಿತಿಯನ್ನು ಮೋದಿ ವಿವರಿಸಿದ್ದಾರೆಯೇ?