ನವದೆಹಲಿ: ಆಡಳಿತ ಪಕ್ಷದ ಸಂಸದ ರಮೇಶ್ ಬಿಧೂಢಿ ಅವರಿಂದ ಅವಹೇಳನಕಾರಿ ಹೇಳಿಕೆಗಳನ್ನು ಎದುರಿಸಿದ ಬಿಎಸ್ಪಿ ಸಂಸದ ಡ್ಯಾನಿಷ್ ಅಲಿ ಅವರ 'ಅಸಭ್ಯ' ವರ್ತನೆ ಬಗ್ಗೆಯೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೇ ಹೇಳಿದ್ದಾರೆ.
ಬಿಧೂಢಿ ಹೇಳಿಕೆಗಳನ್ನೂ ಖಂಡಿಸಿರುವ ದುಬೇ, ಯಾವ ಸಭ್ಯ ಸಮಾಜವೂ ಅವರ (ರಮೇಶ್ ಬಿಧೂಢಿ) ಮಾತುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಸ್ಪಿ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಬಿಜೆಪಿಯ ರಮೇಶ್ ಬಿಧೂಢಿ ಅವರು ಸಂಸತ್ತಿನಲ್ಲಿ ಶುಕ್ರವಾರ ನೀಡಿದ್ದ ಹೇಳಿಕೆಯು ಕೋಲಾಹಲ ಎಬ್ಬಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಜೊತೆಗೆ ಬಿಧೂಡಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದು ಹಾಕಿಸಿದರು.
ವಿರೋಧ ಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾದ ಕಾರಣ ಬಿಧೂಢಿಗೆ ಬಿಜೆಪಿ ಷೋಕಾಸ್ ನೋಟಿಸ್ ಜಾರಿ ಮಾಡಿ, 15 ದಿನಗಳಲ್ಲಿ ವಿವರಣೆ ನೀಡುವಂತೆ ಕೇಳಿದೆ.
ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ದುಬೇ, 'ಡ್ಯಾನಿಷ್ ಅಲಿ ಅವರ ಅಸಭ್ಯ ವರ್ತನೆ ಹಾಗೂ ಹೇಳಿಕೆಗಳ ಬಗ್ಗೆಯೂ ಲೋಕಸಭಾ ಸ್ಪೀಕರ್ ಅವರು ತನಿಖೆ ನಡೆಸಬೇಕು. ಲೋಕಸಭೆ ನಿಯಮಗಳ ಅಡಿಯಲ್ಲಿ, ಮತ್ತೊಬ್ಬ ಸಂಸದರು ತಮಗೆ ನೀಡಲಾದ ಸಮಯದಲ್ಲಿ ಮಾತನಾಡುವುದಕ್ಕೆ ಅಡ್ಡಿಪಡಿಸುವುದು, ಕುಳಿತುಕೊಂಡು ಮಾತನಾಡುವುದು, ನಿರಂತರವಾಗಿ ಹೇಳಿಕೆಗಳನ್ನು ನೀಡುವುದು ಸಹ ತಪ್ಪು' ಎಂದಿದ್ದಾರೆ.
15 ವರ್ಷಗಳಿಂದ ಸಂಸದರಾಗಿರುವುದಾಗಿ ಹೇಳಿಕೊಂಡಿರುವ ದುಬೇ, 'ಇಂತಹ ಘಟನೆಗೆ ಸಾಕ್ಷಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ' ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
रमेश विधुडी जी के लोकसभा में दिए बयान को कोई भी सभ्य समाज ठीक नहीं कह सकता,इसकी जितनी निंदा की जाए कम है लेकिन @loksabhaspeaker जी को सांसद दानिश अली के भी अमर्यादित शब्दों व आचरण की जॉंच करनी चाहिए ।लोकसभा की नियम प्रक्रियाओं के तहत किसी सांसद के निर्धारित समय के बीच टोकना,बैठे…
— Dr Nishikant Dubey (@nishikant_dubey) September 23, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.