ಪುರಿ, ಒಡಿಶಾ: ಇಲ್ಲಿನ ಹೆಸರಾಂತ ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮಗಳು ಜೂನ್ 20ರಂದು ಆರಂಭವಾಗಲಿದ್ದು, ಈ ಬಾರಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಬಹುದು ಎಂದು ದೇಗುಲದ ಆಡಳಿತ ಮಂಡಳಿಯು ನಿರೀಕ್ಷಿಸಿದೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ದೇಗುಲದ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರಂಜನ್ ಕುಮಾರ್ ದಾಸ್ ಅವರು, ರಥಯಾತ್ರೆ ಉತ್ಸವ ಕಾರ್ಯಕ್ರಮಗಳನ್ನು ಸುಗಮ ಮತ್ತು ಸುವ್ಯವಸ್ಥಿತವಾಗಿ ಆಯೋಜಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜೂನ್ 20ರಂದು ಪುರಿಯಲ್ಲಿ ‘ಶ್ರೀ ಗುಂಡಿಚಾ ದಿನ’ ಕಾರ್ಯಕ್ರಮ ನಡೆಯಲಿದೆ. ಆ ದಿನ ಸುಮಾರು 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಅಂದು ಭಕ್ತರು ಕೂಡಾ ರಥ ಎಳೆಯುವ ಕಾರ್ಯಕ್ಕೆ ಕೈಜೋಡಿಸುವರು ಎಂದರು.
ಉತ್ಸವ ಕಾರ್ಯಕ್ರಮಗಳಲ್ಲಿ ಬಹುದಾ (ರಥ ಮರಳಿ ತರುವುದು), ಸುನ ಭೇಸ (ಉತ್ಸವ ಮೂರ್ತಿಗಳಿಗೆ ಅಲಂಕಾರ), ನೀಲಾದ್ರಿ ಬಿಜೆ (ಮುಖ್ಯ ದೇವಸ್ಥಾನಕ್ಕೆ ಮರಳುವುದು) ಕೂಡಾ ಿರಲಿದೆ. ಒಟ್ಟಾರೆ 25 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ ಎಂದರು.
ಬೇಸಿಗೆ, ಬಿಸಿಯ ವಾತಾವರಣದ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯುವ ನೀರು ಸೌಲಭ್ಯ, ಬಿಸಿಲಿನಿಂದ ಬಾಧಿತರಾದ ಭಕ್ತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ,ಕೇಂದ್ರ ಪೊಲೀಸರ ತಲಾ 30 ಸಿಬ್ಬಂದಿ ಇರುವ 180 ತುಕಡಿಗಳನ್ನು ಭದ್ರತೆ ನಿಯೋಜಿಸಲಾಗುವುದು ಎಂದರು.
ರಥಯಾತ್ರೆ ಉತ್ಸವ ಕಾರ್ಯಕ್ರಮದ ಭದ್ರತೆಗಾಗಿ ಆರ್ಎಎಫ್, ಒಡಿಆರ್ಎಎಫ್, ಎನ್ಡಿಆರ್ಎಫ್ ಸಿಬ್ಬಂದಿ ನೆರವು ಪಡೆಯಲಾಗುತ್ತದೆ ಎಂದು ಹೇಳಿದರು.