ನವದೆಹಲಿ:ರಾಹುಲ್ ಗಾಂಧಿ ಅವರು ಅಧ್ಯಕ್ಷ ಹುದ್ದೆ ತೊರೆದಿದ್ದೇ ಕಾಂಗ್ರೆಸ್ಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಲು ಕಾಂಗ್ರೆಸ್ ಹರಸಾಹಸಪಡುತ್ತಿರುವ ಬೆನ್ನಲ್ಲೇ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ.
‘ಯಾಕೆ ಸೋತಿದ್ದೇವೆ ಎಂಬುದನ್ನು ವಿಮರ್ಶಿಸಲು ನಾವು ಒಗ್ಗೂಡಲೇ ಇಲ್ಲ. ನಮ್ಮ ದೊಡ್ಡ ಸಮಸ್ಯೆ ಏನೆಂದರೆ ನಮ್ಮ ನಾಯಕ ಹುದ್ದೆ ತ್ಯಜಿಸಿದ್ದಾರೆ’ ಎಂದು ಖುರ್ಷಿದ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ನಿರ್ಗಮನ ಪಕ್ಷದಲ್ಲಿ ‘ನಿರ್ವಾತ’ ಸೃಷ್ಟಿಸಿದೆ. ‘ಸೋನಿಯಾ ಗಾಂಧಿ ಅವರು ಮತ್ತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ ತಮ್ಮ ನಾಯಕತ್ವ ತಾತ್ಕಾಲಿಕ ಎಂದು ಅವರು ಭಾವಿಸಿದಂತೆ ಕಾಣಿಸುತ್ತಿದೆ. ಹಾಗಿಲ್ಲದಿರಲಿ ಭಾವಿಸುತ್ತೇನೆ’ ಎಂದು ಖುರ್ಷಿದ್ ಹೇಳಿದ್ದಾರೆ.
ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿಯೂ ಪಕ್ಷ ಉತ್ತಮ ಸಾಧನೆ ತೋರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.