ದೇವೊಗಢ(ಜಾರ್ಖಂಡ್): ಭಾರತ್ ಜೋಡೊ ನ್ಯಾಯ ಯಾತ್ರೆ ಭಾಗವಾಗಿ ಜಾರ್ಖಂಡ್ ತಲುಪಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಬಾಬಾ ಬೈದ್ಯನಾಥ ಧಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ‘ಬೈದ್ಯನಾಥ ಧಾಮ ದೇವಾಲಯಲ್ಲಿ ರುದ್ರಾಭಿಷೇಕ ಪೂಜೆ ನೆರೆವೇರಿಸಿದ ರಾಹುಲ್ ಗಾಂಧಿ, ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಪ್ರಾರ್ಥಿಸಿದ್ದಾರೆ’ ಎಂದಿದೆ.
ಶುಕ್ರವಾರ(ಫೆ.2) ಜಾರ್ಖಂಡ್ ತಲುಪಿದ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಬರಮಾಡಿಕೊಂಡರು. ಯಾತ್ರೆ ವೇಳೆ ನಿರುದ್ಯೋಗ, ಬುಡಕಟ್ಟು ಜನರ ಭೂಮಿ ಕಬಳಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಮಣಿಪುರದಿಂದ ಪ್ರಾರಂಭವಾದ ಯಾತ್ರೆಯು ಮಹಾರಾಷ್ಟ್ರದಲ್ಲಿ ಮುಕ್ತಾಯಗೊಳ್ಳುವ ಮೊದಲು ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಸಾಗಲಿದೆ.