ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸರ್ಕಾರದ ಕಲ್ಯಾಣ ಯೋಜನೆಗಳು ರಾಜಸ್ಥಾನದ ಚಹರೆಯನ್ನೇ ಬದಲಿಸಿವೆ: ಕಾಂಗ್ರೆಸ್

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೆ.ಸಿ.ವೇಣುಗೋಪಾಲ್‌ ಮನವಿ
Published 25 ನವೆಂಬರ್ 2023, 11:03 IST
Last Updated 25 ನವೆಂಬರ್ 2023, 11:03 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದ ಜನರು ದಾಖಲೆ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವ ಮೂಲಕ, ಪ್ರಗತಿಪರ, ಯಶಸ್ವಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸರ್ಕಾರವನ್ನು ಚುನಾಯಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಮನವಿ ಮಾಡಿ‌ದ್ದಾರೆ.

ಕಾಂಗ್ರೆಸ್‌ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಮಾದರಿ ಆಡಳಿತ ನೀಡಿದೆ ಎಂದಿರುವ ವೇಣುಗೋಪಾಲ್‌, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಸರ್ಕಾರವು ಕಲ್ಯಾಣ ಯೋಜನೆಗಳ ಮೂಲಕ ರಾಜಸ್ಥಾನದ ಚಹರೆಯನ್ನೇ ಬದಲಿಸಿದೆ. ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಕಲ್ಪಿಸಿದೆ. ಅದನ್ನು ಗಮನದಲ್ಲಿರಿಸಿ ಮತದಾನ ಮಾಡಬೇಕು ಎಂದು ಒತ್ತಿ ಹೇಳಿದ್ದಾರೆ.

'ಚಿರಂಜೀವಿ ಆರೋಗ್ಯ ವಿಮೆ ಯೋಜನೆ, ಮಹಿಳೆಯರಿಗೆ ಮೊಬೈಲ್‌, ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಆರಂಭಿಸಿರುವ 'ಇಂದಿರಾ ರಸೋಯಿ' ಸೇರಿದಂತೆ ಬಡವರ ಪರವಾದ ಹಲವು ಯೋಜನೆಗಳು ರಾಜಸ್ಥಾನದಲ್ಲಿ ಅರ್ಥಪೂರ್ಣ ಪರಿಣಾಮವನ್ನುಂಟುಮಾಡಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, 'ಭ್ರಷ್ಟಾಚಾರದಿಂದ ಕೂಡಿದ ಬಿಜೆಪಿಯ ದುರಾಡಳಿತವನ್ನೂ ಜನರು ನೆನಪಿಸಿಕೊಳ್ಳಬೇಕು. ಆ ಪಕ್ಷದ ನಾಯಕರು ಜಾತಿ–ಜಾತಿಗಳನ್ನು, ಧರ್ಮ–ಧರ್ಮಗಳನ್ನು ಎತ್ತಿಕಟ್ಟುವುದರಲ್ಲಿ ಹಾಗೂ ರಾಜ್ಯದ ಬೊಕ್ಕಸ ಲೂಟಿ ಮಾಡುವುದರಲ್ಲಿ ನಿರತರಾಗಿದ್ದರು' ಎಂದು ದೂರಿದ್ದಾರೆ.

'ಚುನಾವಣೆ ವೇಳೆ ನೀಡಿರುವ ಎಳೂ ಗ್ಯಾರಂಟಿಗಳನ್ನು ನಾವು ಅಧಿಕಾರಕ್ಕೆ ಮರಳುತ್ತಿದ್ದಂತೆ ಪೂರೈಸುತ್ತೇವೆ. ಕರ್ನಾಟದಲ್ಲಿ ಈಗಾಗಲೇ ಅದನ್ನು ಮಾಡಿದ್ದೇವೆ. ಅದೇರೀತಿ ರಾಜಸ್ಥಾನದಲ್ಲಿಯೂ ಮಾಡುತ್ತೇವೆ' ಎಂದಿದ್ದಾರೆ.

ಡಿಸೆಂಬರ್‌ 3ಕ್ಕೆ ಫಲಿತಾಂಶ
ರಾಜಸ್ಥಾನ ವಿಧಾನಸಭೆಯು 200 ಸದಸ್ಯ ಬಲ ಹೊಂದಿದ್ದು, ಒಂದು ಸ್ಥಾನ ಹೊರತುಪಡಿಸಿ ಉಳಿದ 199 ಕ್ಷೇತ್ರಗಳಿಗೆ ಇಂದು (ನವೆಂಬರ್‌ 25ರಂದು) ಮತದಾನ ನಡೆಯುತ್ತಿದೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗುರ್ಮೀತ್ ಸಿಂಗ್ ಕೊನೂರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಶ್ರೀಗಂಗಾನಗರದ ಕರಣ್‌ಪುರ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಡಿಸೆಂಬರ್‌ 3ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT