ನವದೆಹಲಿ: ರಾಜಸ್ಥಾನದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಯೋಜನೆಗಳನ್ನು ತಿರಸ್ಕರಿಸಲಿದ್ದಾರೆ. ಜೊತೆಗೆ ಕೇಂದ್ರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಮಿತಿ ಇದೆ ಎಂಬುದನ್ನು ಅವರ ಸರ್ಕಾರಕ್ಕೆ ಅರ್ಥ ಮಾಡಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಗೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ.
ರಾಜಸ್ಥಾನ ಜನರು ಕಳೆದ ಮೂರು ದಶಕಗಳಿಂದ ಪರ್ಯಾಯ ರಾಜಕೀಯ ಪಕ್ಷಕ್ಕೆ ಅಧಿಕಾರ ನೀಡುತ್ತಾ ಬಂದಿದ್ದಾರೆ. ಈ ಬಾರಿ ಹಾಗಾಗುವುದಿಲ್ಲ. ಸದ್ಯ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವೇ ಮತ್ತೆ ಸರ್ಕಾರ ರಚಿಸಲಿದೆ ಎಂದು ಜೈರಾಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ರಾಜಸ್ಥಾನದಲ್ಲಿ ಮತದಾನ ನಡೆಯುತ್ತಿದೆ. ಇಂದು ಅಲ್ಲಿನ ಜನರು ಪ್ರಧಾನಮಂತ್ರಿಯವರ ಸುಳ್ಳು ಯೋಜನೆಗಳನ್ನು ತಿರಸ್ಕರಿಸಲಿದ್ದಾರೆ. ಆ ಮೂಲಕ ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರೀಯ ತನಿಖಾ ದಳವನ್ನು (ಸಿ.ಬಿ.ಐ) ದುರುಪಯೋಗಪಡಿಸಿಕೊಳ್ಳುವುದಕ್ಕೂ ಮಿತಿ ಇದೆ ಎಂಬುದನ್ನು ಅರ್ಥಮಾಡಿಸಲಿದ್ದಾರೆ' ಎಂದು ಗುಡುಗಿದ್ದಾರೆ.