ಜೈಪುರ : ರಾಜಸ್ಥಾನದಲ್ಲಿ ಧಾರಾಕಾರ ಮಳೆಯ ಪರಿಣಾಮಕ್ಕೆ ಗುರಿಯಾಗಿರುವ ಜಾಲೋರ್, ಸಿರೋಹಿ, ಬಾರ್ಮರ್ ಜಿಲ್ಲೆಗಳಲ್ಲಿ ಮಂಗಳವಾರ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ವೈಮಾನಿಕ ಸಮೀಕ್ಷೆ ನಡೆಸಿದರು.
ಎರಡು ದಿನದ ಪ್ರವಾಸದ ಭಾಗವಾಗಿ ಗೆಹಲೋತ್ ಅವರು ಬಾರ್ಮರ್ ಜಿಲ್ಲೆಯ ಚೌತಾನ್ಗೆ ಬಂದಿಳಿದಿದರು. ಈ ಸಂದರ್ಭದಲ್ಲಿ ಅವರು, ‘ಮಳೆಯಿಂದ ಬಾಧಿತರಾದವರಿಗೆ ನಿಯಮಾನುಸಾರ ಪರಿಹಾರ ವಿತರಿಸಲಾಗುವುದು’ ಎಂದು ತಿಳಿಸಿದರು.
ಶನಿವಾರ ಮತ್ತು ಭಾನುವಾರ ಮೂರು ಜಿಲ್ಲೆಗಳ ಹಲವೆಡೆ ಭಾರಿ ಮತ್ತು ಧಾರಾಕಾರ ಮಳೆಯಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಏಳು ಮಂದಿ ಮೃತಪಟ್ಟಿದ್ದರು.
ಗುಜರಾತ್ ಮೂಲಕ ರಾಜ್ಯದ ಗಡಿ ಪ್ರವೇಶಿಸಿದ್ದ ಬಿಪೊರ್ಜಾಯ್ ಚಂಡಮಾರುತ ಮತ್ತು ನಂತರ ಕಂಡುಬಂದಿದ್ದ ವಾಯುಭಾರ ಕುಸಿತದಿಂದಾಗಿ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿತ್ತು.
ವೈಮಾನಿಕ ಸಮೀಕ್ಷೆಯ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪರಿಸ್ಥಿತಿ ಗಮನಿಸಲಾಗುತ್ತಿದೆ. ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಎದುರಾದರೂ ಅದರಿಂದ ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ಎಚ್ಚರವಹಿಸಿದ್ದೇವೆ ಎಂದು ಹೇಳಿದರು.
‘ಮುಂಜಾಗ್ರತೆಯಾಗಿ ಈಗಾಗಲೇ ಸುಮಾರು 17 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಗಳಿಗೆ ಸೇನೆಯ ನೆರವು ಪಡೆಯಲಾಗಿದೆ. ಹಾನಿ ಪ್ರಮಾಣದ ಅಂದಾಜು ನಡೆದಿದ್ದು, ನಿಯಮಗಳ ಅನುಸಾರ ಪರಿಹಾರ ವಿತರಿಸಲಾಗುತ್ತದೆ’ ಎಂದು ತಿಳಿಸಿದರು