ಸಿಕರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಗ್ಯಾಂಗ್ಸ್ಟರ್ ರಾಜು ಥೇತ್ ಎಂಬಾತನನ್ನು ನಾಲ್ವರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಉದ್ಯೋಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾಲಿ ರಸ್ತೆಯಲ್ಲಿರುವ ತನ್ನ ಮನೆಯ ಗೇಟ್ ಬಳಿ ನಿಂತಿದ್ದಾಗ ರಾಜು ಮೇಲೆ ಗುಂಡಿನ ದಾಳಿ ನಡೆದಿದೆ ಎಂದೂ ಹೇಳಿದ್ದಾರೆ.
ರಾಜು ಥೇತ್ ಹಲವರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆದು ಹೊರಬಂದಿದ್ದ. 2017ರಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದ ಗ್ಯಾಂಗ್ಸ್ಟರ್ ಆನಂದ್ಪಾಲ್ ಸಿಂಗ್ನ ಪ್ರತಿಸ್ಪರ್ಧಿ ಗುಂಪಿನಲ್ಲಿ ಈತ ಗುರುತಿಸಿಕೊಂಡಿದ್ದ ಎಂದೂ ಹೇಳಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ತಂಡದವನೆಂದು ಫೇಸ್ಬುಕ್ನಲ್ಲಿ ಹೇಳಿಕೊಂಡಿರುವ ರೋಹಿತ್ ಗೋದಾರ ಎಂಬಾತ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾನೆ. ಆನಂದ್ಪಾಲ್ ಸಿಂಗ್ ಮತ್ತು ಬಲ್ಬೀರ್ ಬಾನುಡಾ ಅವರ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ. ಆನಂದ್ಪಾಲ್ ಸಿಂಗ್ ತಂಡದ ಸದಸ್ಯನಾಗಿದ್ದ ಬಲ್ಬೀರ್ ಬಾನುಡಾ 2014ರಲ್ಲಿ ಬಿಕಾನೇರ್ ಜೈಲಿನಲ್ಲಿ ನಡೆದಿದ್ದ ಗ್ಯಾಂಗ್ ವಾರ್ನಲ್ಲಿ ಹತ್ಯೆಗೀಡಾಗಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.