ಜೈಪುರ: ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲ ಮುಂದುವರಿದಿದೆ. ಈ ನಡುವೆ ಶಾಸಕ ಅಜಯ್ ಸಿಂಗ್ ಸೇರಿದಂತೆ 10 ಶಾಸಕರು ಪಕ್ಷದ ಪ್ರಭಾವಿ ನಾಯಕಿ ವಸುಂಧರಾ ರಾಜೇ ನಿವಾಸಕ್ಕೆ ಇಂದು ಭೇಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೆ ಬಿಜೆಪಿ ಚುನಾವಣೆ ಎದುರಿಸಿತ್ತು. ಆದರೂ ಭಾರಿ ಬಹುಮತದೊಂದಿಗೆ ಗೆದ್ದಿತ್ತು. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಮುನ್ನಲೆಗೆ ಬಂದಿದ್ದು, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್, ವಸುಂಧರಾ ರಾಜೇ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಶಾಸಕರಾದ ಬಾಬು ಸಿಂಗ್, ಅಜಯ್ ಸಿಂಗ್ ಸೇರಿದಂತೆ ಸುಮಾರು 10 ಶಾಸಕರ ತಂಡ ಸಿವಿಲ್ ಲೈನ್ಸ್ನಲ್ಲಿರುವ ರಾಜೇ ನಿವಾಸಕ್ಕೆ ಭೇಟಿ ನೀಡಿದೆ. ಸೋಮವಾರ ಅಥವಾ ಮಂಗಳವಾರ ಇನ್ನು ಹಲವು ನಾಯಕರು ರಾಜೇ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಚುನಾವಣೆ ಫಲಿತಾಂಶ ಹೊರಬಿದ್ದ (ಡಿ.3) ಬಳಿಕದ ಎರಡು ದಿನಗಳಲ್ಲಿ 50 ಶಾಸಕರು ರಾಜೇ ಅವರನ್ನು ಭೇಟಿಯಾಗಿದ್ದರು. ‘ಬಲ ಪ್ರದರ್ಶನ’ದ ಮೂಲಕ ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬುದನ್ನು ತೋರಿಸಿಕೊಡಲು ಅವರು ಶಾಸಕರ ಸಭೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು.
ರಾಜಸ್ಥಾನ ವಿಧಾನಸಭೆಯ 199 ಸ್ಥಾನಗಳ ಪೈಕಿ 115ರಲ್ಲಿ ಗೆದ್ದಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ.