ನವದೆಹಲಿ: ಡಾ.ಬಿ.ಆರ್.ಅಂಬೇಡ್ಕರ್, ಜಗಜೀವನ ರಾಂ, ಕಾನ್ಷಿರಾಂ ಕುಟುಂಬದ ಸದಸ್ಯರು ಅಯೋಧ್ಯೆಯಲ್ಲಿ ಇದೇ 22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನಿತರಲ್ಲಿ ಸೇರಿದ್ದಾರೆ.
ಆಹ್ವಾನ ಪಡೆದ ಪರಿಶಿಷ್ಟ ಜಾತಿಗೆ ಸೇರಿದ ಪ್ರಮುಖರಲ್ಲಿ ಈ ಕುಟುಂಬದವರು ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ರಾಮಜನ್ಮಭೂಮಿ ಆಂದೋಲನದಲ್ಲಿ ಮೃತಪಟ್ಟಿದ್ದ ಕರಸೇವಕರ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಈ ಸಮಾರಂಭದಲ್ಲಿ ರೈತರು, ಕಾರ್ಮಿಕರು, ದೇಶದ ವಿವಿಧೆಡೆಯಿಂದ ಬರುವ ಮಠಾಧೀಶರು ಸೇರಿದಂತೆ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ.
ಆತಿಥೇಯ ರಾಜ್ಯ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಹೊರತುಪಡಿಸಿ, ಬೇರಾವುದೇ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಉಳಿದಂತೆ, ರಾಜಕೀಯ ಮುಖಂಡರಿಗೆ ಅವರು ಕೇಂದ್ರ ಅಥವಾ ರಾಜ್ಯಗಳಲ್ಲಿ ಸಚಿವರೇ ಆಗಿರಲಿ, ಆಹ್ವಾನ ನೀಡಲಾಗಿಲ್ಲ ಎಂದು ತಿಳಿಸಿದೆ.
ಸಮಾರಂಭದ ಆಹ್ವಾನಿತರಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸೇನೆಯ ಮೂರೂ ಪಡೆಗಳ ನಿವೃತ್ತ ಮುಖ್ಯಸ್ಥರು, ಮಾಜಿ ರಾಯಭಾರಿಗಳು, ಉನ್ನತ ಅಧಿಕಾರಿಗಳು, ಪ್ರಮುಖ ಆಯಕಟ್ಟಿನ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿಗಳು ಸೇರಿದ್ದಾರೆ.