ನವದೆಹಲಿ: ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೆಹಲಿಯ ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆವರೆಗೆ ಕೆಂಪುಕೋಟೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ) ತಿಳಿಸಿದೆ.
45 ವರ್ಷಗಳ ದಾಖಲೆ ಮಟ್ಟವನ್ನು ಮುಟ್ಟಿದ ಬಳಿಕ ಯಮುನಾ ನದಿ ನೀರು ದೆಹಲಿಯ ರಸ್ತೆಗಳಿಗೆ ನುಗ್ಗುತ್ತಿದೆ. ಹಲವು ಕಡೆಗಳಲ್ಲಿ ಆಳೆತ್ತರದ ನೀರು ತುಂಬಿಕೊಂಡಿದೆ.
ಯುನೆಸ್ಕೊ ಪಾರಂಪರಿಕ ತಾಣ, ಮೊಘಲರ ಕಾಲದ ಕೆಂಪು ಕೋಟೆ ಗೋಡೆ ಬಳಿಗೂ ನೀರು ತಲುಪಿದೆ. ಸೊಂಟದುದ್ದದ ನೀರಿನಲ್ಲಿ ಜನರು ಓಡಾಡುತ್ತಿರುವುದು ಕಂಡುಬಂದಿದೆ.
ರಾಜಘಾಟ್ ಮತ್ತು ಪುರಾನಾ ಕಿಲಾ ಪ್ರದೇಶಗಳಲ್ಲೂ ಭಾರಿ ಪ್ರಮಾಣದ ನೀರು ತುಂಬಿಕೊಂಡಿರುವ ಬಗ್ಗೆ ವರದಿಯಾಗಿದೆ.
'ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಹಾಗೂ ಅವಶೇಷಗಳ ನಿಯಮಗಳು, 1959ರ ನಿಯಮ 5ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅನ್ವಯ ಭಾರೀ ಮಳೆಯ ಕಾರಣ ಜುಲೈ 13ರ ದ್ವಿತೀಯಾರ್ಧದಿಂದ ಜುಲೈ 14, 2023ರವರೆಗೆ ದೆಹಲಿಯ ಕೆಂಪು ಕೋಟೆಗೆ ಸಾರ್ವಜನಿಕರಿಗೆ ಮತ್ತು ಸಾಮಾನ್ಯ ಸಂದರ್ಶಕರಿಗೆ ಪ್ರವೇಶ ನಿರ್ಬಂಧಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರು ನಿರ್ದೇಶಿಸಿದ್ದಾರೆ’ ಎಂದು ಗುರುವಾರ ಎಎಸ್ಐ ಆದೇಶದಲ್ಲಿ ತಿಳಿಸಿದೆ.