ನವದೆಹಲಿ: ‘ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಮುಚ್ಚಯ ನಿರ್ಮಾಣದಿಂದ ಹಿಡಿದು ದೇಶದ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿ ರಿಲಯನ್ಸ್ ಇಂಡಸ್ಟ್ರೀಸ್ ಬೆಳೆದಿದೆ. ನಮಗೆ ಇಷ್ಟಕ್ಕೇ ಸಂತೃಪ್ತಿ ಆಗುವುದಿಲ್ಲ. ವಿಶ್ವದ ಪ್ರಮುಖ ಹತ್ತು ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆಯಬೇಕಿದೆ’ ಎಂದು ಉದ್ಯಮಿ ಮುಕೇಶ್ ಅಂಬಾನಿ ಆಶಿಸಿದ್ದಾರೆ.
ರಿಲಯನ್ಸ್ ಸಮೂಹದ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಜನ್ಮ ದಿನದ ಅಂಗವಾಗಿ ಗುರುವಾರ ನಡೆದ ರಿಲಯನ್ಸ್ ಕುಟುಂಬ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಡಿಜಿಟಲ್ ದತ್ತಾಂಶ ವೇದಿಕೆ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಅಳವಡಿಕೆಗೆ ಸಂಬಂಧಿಸಿದಂತೆ ಜಾಗತಿಕ ನಾಯಕರ ಪಟ್ಟಿಯಲ್ಲಿ ರಿಲಯನ್ಸ್ ಕೂಡ ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದು ಹೇಳಿದರು.
‘ಉದ್ಯಮಕ್ಕಾಗಿ ದೇಶೀಯ ಮತ್ತು ಜಾಗತಿಕ ಪರಿಸರವು ಶೀಘ್ರಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ಹಾಗಾಗಿ, ಅಲ್ಲಿ ಸಂತೃಪ್ತಿಗೆ ಅವಕಾಶವೇ ಇರುವುದಿಲ್ಲ. ಈ ಹಿಂದೆಯೂ ರಿಲಯನ್ಸ್ ಸಂತೃಪ್ತಿಗೊಂಡಿಲ್ಲ; ಭವಿಷ್ಯದ ದಿನಗಳಲ್ಲೂ ಸಂತೃಪ್ತಿ ಹೊಂದುವುದಿಲ್ಲ’ ಎಂದರು.