ಜಲ್ನಾ (ಪಿಟಿಐ): ಮರಾಠ ಸಮುದಾಯದ ಮೀಸಲಾತಿ ಸಮಸ್ಯೆಯನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಉದಾರ ಮನಸ್ಸಿನಿಂದ ಪರಿಗಣಿಸಿ, ಪರಿಹರಿಸಬೇಕು ಎಂದು ಮರಾಠ ಮೀಸಲಾತಿ ಕಾರ್ಯಕರ್ತ ಮನೋಜ್ ಜಾರಂಗೆ ಶುಕ್ರವಾರ ಆಗ್ರಹಿಸಿದರು.
ಮೀಸಲಾತಿಗೆ ಆಗ್ರಹಿಸಿ, ತಮ್ಮ ಹುಟ್ಟೂರಾದ ಜಲ್ನಾ ಜಿಲ್ಲೆಯ ಅಂತರವಾಲಿ ಸಾರಥಿ ಗ್ರಾಮದಿಂದ ಶನಿವಾರ ಬೆಳಿಗ್ಗೆ 9 ಗಂಟೆಗೆ ಮುಂಬೈಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮರಾಠ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ಫಡಣವೀಸ್ ಅವರ ಮೇಲಿದೆ. ಅವರು ಈ ವಿಷಯವನ್ನು ಹೃದಯ ಮತ್ತು ಮನಸ್ಸಿನಿಂದ ಯೋಚಿಸಿ ಪರಿಹರಿಸಬೇಕು’ ಎಂದರು.
‘ಮರಾಠ ಸಮುದಾಯದ ಮೀಸಲಾತಿ ಸಮಸ್ಯೆಯನ್ನು 30 ದಿನಗಳಲ್ಲಿ ಬಗೆಹರಿಸುವುದಾಗಿ ಏಳು ಸಚಿವರೊಂದಿಗೆ ಬಂದಿದ್ದ ಸಚಿವ ಗಿರೀಶ್ ಮಹಾಜನ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಆಗ ನಾವು ಸಚಿವರಿಗೆ 40 ದಿನಗಳ ಕಾಲಾವಕಾಶ ನೀಡಿದ್ದೇವೆ. ಆದರೆ, ಈಗ ಆ ಸಚಿವರು ಎಲ್ಲಿ ಅಡಗಿದ್ದಾರೆ’ ಎಂದು ಮನೋಜ್ ಪ್ರಶ್ನಿಸಿದರು.
ಮುಂಬೈ ಯಾತ್ರೆಯು ತಮ್ಮ ಕೊನೆಯ ಹೋರಾಟವಾಗಿದೆ ಎಂದ ಅವರು, ಇದೇ 26ರಂದು ಮುಂಬೈನಲ್ಲಿ ಶಕ್ತಿ ಪ್ರದರ್ಶಿಸಲು ಮರಾಠ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಬೇಕು ಎಂದು ಕರೆ ನೀಡಿದರು.