ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಸಂದೇಶ್ಖಾಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು ಮಾಡಿದ್ದಾರೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವೂ(ಎನ್ಸಿಎಸ್ಸಿ) ಸಹ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿತ್ತು.
ಪಶ್ಚಿಮ ಬಂಗಾಳದ ಸಂದೇಶ್ಖಾಲಿಯ ಪರಿಸ್ಥಿತಿ ಈಗಲೂ ಆತಂಕಕಾರಿಯಾಗಿದೆ ಎಂದು ಮುರ್ಮು ಭೇಟಿ ಬಳಿಕ ರೇಖಾ ಶರ್ಮಾ ಹೇಳಿದ್ದಾರೆ.
ಸಂದೇಶ್ಖಾಲಿ ಅಲ್ಲದೆ ಆ ರೀತಿಯ ಹಲವು ಘಟನೆಗಳು ಪಶ್ಚಿಮ ಬಂಗಾಳದಲ್ಲಿ ನಡೆದಿವೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹಾಗಾಗಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಮಹಿಳಾ ಆಯೋಗ ಶಿಫಾರಸು ಮಾಡಿದೆ ಎಂದೂ ಅವರು ಹೇಳಿದ್ದಾರೆ.
ರಾಷ್ಟ್ರಪತಿಗಳಿಗೂ ಪಶ್ಚಿಮ ಬಂಗಾಳದ ಸ್ಥಿತಿ ಬಗ್ಗೆ ಅರಿವಿದೆ. ಅವರು ನಿಕಟವಾಗಿ ಆ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಶರ್ಮಾ ಹೇಳಿದರು.
ಟಿಎಂಸಿ ನಾಯಕ ಶಹಜಹಾನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂದೇಶ್ಖಾಲಿಯ ಹಲವು ಮಹಿಳೆಯರು ಆರೋಪಿಸಿದ್ದು, ಅಕ್ರಮವಾಗಿ ರೈತರ ಭೂಮಿ ವಶಪಡಿಸಿಕೊಂಡ ಆರೋಪವೂ ಅವರ ಮೇಲಿದೆ. ಇತ್ತೀಚೆಗೆ, ಪೊಲೀಸರು ಅವರನ್ನು ಬಂಧಿಸಿದ್ದು, ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ವಶಕ್ಕೆ ಇಂದು ಒಪ್ಪಿಸಿದ್ದಾರೆ.