ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿ 2018ರ ಮಾರ್ಚ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ಮೇಲಿನ ತೀರ್ಪು ಮಂಗಳವಾರ ಪ್ರಕಟವಾಗಲಿದೆ.
ಈ ಕಾಯ್ದೆ ಅಡಿಯಲ್ಲಿ ಆರೋಪಕ್ಕೆ ಒಳಗಾದವರಿಗೆ ನಿರೀಕ್ಷಣಾ ಜಾಮೀನು ಮತ್ತು ಬಂಧನಕ್ಕೆ ಮೊದಲು ತನಿಖೆಯ ಅವಕಾಶಗಳನ್ನು ಒದಗಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಕಾಯ್ದೆಯನ್ನುಈ ತೀರ್ಪು ‘ದುರ್ಬಲಗೊಳಿಸಿದೆ’ ಎಂಬ ಆರೋಪ ಕೇಳಿಬಂದಿತ್ತು.
ಕಾಯ್ದೆಯು ದುರ್ಬಳಕೆ ಆಗುತ್ತಿದೆ ಎಂಬ ಆರೋಪ ಇದ್ದರೆ ಕಾಯ್ದೆಯನ್ನೇ ದುರ್ಬಲ ಮಾಡಬೇಕು ಎಂದು ಅರ್ಥವಲ್ಲ ಎಂದು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಸೆ. 18ರಂದು ಹೇಳಿತ್ತು. ತೀರ್ಪನ್ನು ಕಾಯ್ದಿರಿಸಲಾಗಿತ್ತು.
ಕಾಯ್ದೆಯಲ್ಲಿ ಇರುವ ಕಠಿಣ ನಿಯಮಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದ ಕೇಂದ್ರ ಸರ್ಕಾರ, ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶವು ಅಸಿಂಧುವಾಗುವ ರೀತಿಯಲ್ಲಿ ಕಾಯ್ದೆಗೆ 2018ರ ಆಗಸ್ಟ್ 9ರಂದು ತಿದ್ದುಪಡಿಯನ್ನೂ ಮಾಡಲಾಗಿದೆ.