ಮುಂಬೈ: ‘ಬಾಲಿವುಡ್ ನಟಿಯೊಬ್ಬರಿಗೆ ಕೇಂದ್ರವು ವೈ–ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಆದರೆ ಬೆದರಿಕೆಗಳ ಭಯದಲ್ಲಿ ಜೀವಿಸುತ್ತಿರುವ ಹಾಥರಸ್ನ ದಲಿತ ಸಂತ್ರಸ್ತೆಯ ಕುಟುಂಬಕ್ಕೆ ಯಾವುದೇ ಭದ್ರತೆ ನೀಡುತ್ತಿಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ‘ ಎಂದು ಶಿವಸೇನಾಟೀಕಿಸಿದೆ.
ಹಾಥರಸ್ನ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಬಳಿಕ ಸಂತ್ರಸ್ಥೆಯ ಕುಟುಂಬಕ್ಕೆ ಜೀವ ಬೆದರಿಕೆಗಳು ಬರುತ್ತಿವೆ. ಅವರು ಭಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.
‘ನಟಿಗೆ ಭದ್ರತೆ ನೀಡಿ, ಸಂತ್ರಸ್ತೆ ಕುಟುಂಬಕ್ಕೆ ನೀಡದರಿವುದು ಇದು ಯಾವ ರೀತಿಯ ಸಾಮಾಜಿಕ ನ್ಯಾಯ. ಈ ರೀತಿಯ ನ್ಯಾಯವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಹೇಳಿಲ್ಲ‘ ಎಂದು ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ದೂರಿದೆ.
‘ಸಂತ್ರಸ್ತೆಯ ಕುಟುಂಬವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಮನವಿ ಮಾಡಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಮುಂದಾಗಿದೆ. ಸರ್ಕಾರದ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ‘ ಎಂದು ಸೇನೆ ಹೇಳಿದೆ.
‘ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತೆ ಶವದ ಅಂತ್ಯಕ್ರಿಯೆ ಮಾಡುವ ಮೂಲಕ ಸಾಕ್ಷಿ ನಾಶಪಡಿಸಿದೆ. ಉನ್ನತ ಅಧಿಕಾರಿಗಳ ಆದೇಶವಿಲ್ಲದೆ ಅಲ್ಲಿನ ಪೊಲೀಸರು ಅಂತ್ಯಕ್ರಿಯೆ ನಡೆಸಿರಲು ಸಾಧ್ಯವೇ‘ ಎಂದು ಶಿವಸೇನೆ ಪ್ರಶ್ನಿಸಿದೆ.
ಮುಂಬೈ ಪೊಲೀಸ್ ವಿರುದ್ಧ ಬಾಲಿವುಡ್ ನಟಿ ಕಂಗನಾ ರನೌತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಹಿನ್ನೆಲೆಯಲ್ಲಿ ಕಳೆದ ತಿಂಗಳು ಕೇಂದ್ರ ಸರ್ಕಾವು ಕಂಗನಾ ರನೋತ್ಗೆ‘ವೈ–ಪ್ಲಸ್’ ಶ್ರೇಣಿಯ ಭದ್ರತೆಯನ್ನು ಒದಗಿಸಿತ್ತು.