ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ತಲುಪಲು ಬಳಸು ಮಾರ್ಗ, ಐಎಸ್‌ ಸೇರುವುದೇ ಗುರಿ

ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಶೈಲಿ * ಕೇರಳ ಪೊಲೀಸರಿಗೆ 2017ರಲ್ಲಿ ಸಿಕ್ಕಿದ್ದ ಸುಳಿವು
Last Updated 30 ಸೆಪ್ಟೆಂಬರ್ 2022, 14:33 IST
ಅಕ್ಷರ ಗಾತ್ರ

ನವದೆಹಲಿ:ಉಗ್ರವಾದಿ ಸಂಘಟನೆ ಐಎಸ್‌ ಸೇರಿರುವ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸದಸ್ಯರು, ಜಿಹಾದ್‌ನಲ್ಲಿ ಭಾಗಿಯಾಗಲು ಸಿರಿಯಾದಂಥ ಪ್ರದೇಶ ತಲುಪಲು ಸಾಮಾನ್ಯವಾಗಿ ದೀರ್ಘ ಪ್ರಯಾಣ, ಬಳಸು ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ತಪಾಸಣೆಯ ವೇಳೆ ಭದ್ರತಾ ಸಿಬ್ಬಂದಿಗೆ ಸಿಕ್ಕಿಬೀಳುವುದರಿಂದ ಪಾರಾಗುವುದು ಇದರ ಗುರಿ. ಹೀಗೆ, ವೃತ್ತಾಕಾರದ ಪ್ರಯಾಣ ಮಾರ್ಗದಲ್ಲಿ ವಿದೇಶಿ ನೆಲ ಮುಟ್ಟಿದ ಯುವಕರು ಹತ್ಯೆಯಾದ, ಬಂಧಿತರಾದ ನಿದರ್ಶನಗಳು ಇವೆ. ಎನ್‌ಐಎ ಈ ಕುರಿತು ದಾಖಲೆ ಸಿದ್ಧಪಡಿಸುತ್ತಿದೆ.

ಐಎಸ್‌ ಸಂಘಟನೆಯ ಜೊತೆಗೆ ನಂಟು ಹೊಂದಿದ್ದ ಹಾಗೂ ದೇಶದಲ್ಲಿ ಕೋಮುದ್ವೇಷವನ್ನು ಬೆಳೆಸಲು ಯತ್ನಿಸುತ್ತಿದ್ದ ಆರೋಪದಡಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಐದು ವರ್ಷದ ಅವಧಿಗೆ ನಿಷೇಧಿಸಿದೆ.

ಮುಸ್ಲಿಂನ ಕೆಲ ಯುವಕರು ಸಿರಿಯಾಗೆ ವಲಸೆ ಹೋಗಿದ್ದರು. ಐಎಸ್‌ ಸೇರುವುದು ಅವರ ಯೋಜನೆ. ಅಲ್ಲಿ, ಜಿಹಾದ್‌ನಲ್ಲಿ ಭಾಗಿಯಾಗಿದ್ದ ಆರೋಪದಡಿ ಪ್ರಕರಣ ದಾಖಲಾಗಿರುವ ಹೆಚ್ಚಿನವರು ಪಿಎಫ್‌ಐ ಸದಸ್ಯರೇ ಎಂಬ ಮಾಹಿತಿ 2017ರಲ್ಲಿಯೇ ಕೇರಳ ಪೊಲೀಸರಿಗೆ ಬಂದಿತ್ತು.

ಗಲ್ಫ್‌ನಲ್ಲಿದ್ದು, ಮರಳಿದ್ದ ಹಮ್ಜಾ ಎಂಬಾತ ಐಎಸ್‌ಗೆ ಕೇರಳದ ಯುವಕರನ್ನು ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ತನ್ನ ಯೋಜನೆ ಜಾರಿಗೆ, ಮೂಲಭೂತವಾದ ಮನಸ್ಥಿತಿ ಬೆಳೆಸಿಕೊಂಡಿದ್ದ, ಪಿಎಫ್‌ಐ ಬೆಂಬಲಿಗರ ಸ್ನೇಹ ಗಳಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಫ್‌ಐ ಸಂಘಟನೆಯ ವಿಭಾಗೀಯ ಅಧ್ಯಕ್ಷರಾಗಿದ್ದ ಮೊಹಮ್ಮದ್‌ ಸಮೀರ್‌ ಅಲಿಯಾಸ್‌ ಅಬು ಸಫ್ತ್‌ವನ್ ಎಂಬಾತ ಹೀಗೆ ಸಿರಿಯಾ ತಲುಪಿಸಿ ಐಎಸ್‌ ಸೇರಿದ್ದ. ಅದಕ್ಕೂ ಮುನ್ನ ಭಾರತದಿಂದ ನಿರ್ಗಮಿಸಿ ಸಿರಿಯಾ ತಲುಪಲು ಬಳಸು ಮಾರ್ಗ ಅನುಸರಿಸಿದ್ದು, ಹಲವೆಡೆ ಆಶ್ರಯ ಪಡೆದಿದ್ದ.

ಇದೇ ಕ್ರಮದಲ್ಲಿ ಹಲವು ಆರೋಪಿಗಳು ಸೌದಿ ಅರೇಬಿಯಾ, ಮಲೇಷ್ಯಾ, ಟರ್ಕಿಯೆಗೂ ತಲುಪಿದ್ದು, ಸಿರಿಯಾದಲ್ಲಿ ಜಿಹಾದ್‌ಗೆ ಸೇರುವಂತೆ ತಮಗೆ ಬರಲಿರುವ ಆಹ್ವಾನಕ್ಕಾಗಿ ಕಾಯುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹೀಗೆ ಸಿರಿಯಾ ತಲುಪಿದ್ದ ಪಿಎಫ್‌ಐ ನಾಯಕರಾದ ಅಬ್ದುಲ್ ಮನಾಫ್‌ ಅಲಿಯಾಸ್ ಅಬು ಫತಿಮಾಂದ್‌, ಮೊಹಮ್ಮದ್‌ ಸಮೀರ್ ಅಲಿಯಾಸ್‌ ಅಬು ಸಫ್‌ವನ್‌ ಜಿಹಾದ್‌ನಲ್ಲಿ ಭಾಗವಹಿಸಿದ್ದಾಗಲೇ ಹತರಾಗಿದ್ದರು. ತನಿಖೆಯು ಮುಂದುವರಿದಂತೆ ಈ ಪ್ರಕ್ರಿಯೆಯಲ್ಲಿ ಪ್ರಮುಖನಾಗಿದ್ದ ಆರೋಪಿ ಸೇರಿ ಐದು ಜನರನ್ನು ಕೇರಳ ಪೊಲೀಸರು, ಐಎಸ್‌ ಸೇರುವ ಮೊದಲೇ ಬಂಧಿಸಿದ್ದರು ಎಂಬುದು ಗೊತ್ತಾಗಿದೆ.

ಐಎಸ್‌ ಬೆಂಬಲಿಸಿದ ಆರೋಪದಡಿ 17 ಆರೋಪಿಗಳ ವಿರುದ್ಧ ಕೇರಳದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಮುಖ್ಯ ಆರೋಪಿ ಹಮ್ಜಾ ಎಂಬಾತ ‘ಸಲಾಫಿ ಅಭಿಯಾನದ ಕಟ್ಟಾ ಬೆಂಬಲಿಗ’. ಐಎಸ್ ಮತ್ತು ತಾಲಿಬಾನ್‌ ಸೇರುವಂತೆ ಇತರರಿಗೆ ಉಪನ್ಯಾಸ ನೀಡುತ್ತಿದ್ದ.

ಐಎಸ್‌ ಕುರಿತು ಆಕರ್ಷಣೆಗೆ ಒಳಗಾಗಿದ್ದ ಸಮೀರ್ ಬಳಿಕ, ಈ ಕುರಿತು ಪಿಎಫ್‌ಐನ ಶಾಹಜಹಾನ್ ವಿ.ಕೆ ಹಾಗೂ ಮೊಹಮ್ಮದ್‌ ಶಾಜಿಲ್‌ ಎಂಬುವರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದ.

ಉಮ್ರಾ ನಡೆಸುವ ನೆಪದಲ್ಲಿ ಕುಟುಂಬ ಸದಸ್ಯರೊಂದಿಗೆ ಮೊಹಮ್ಮದ್ ಸಮೀರ್ ಡಿಸೆಂಬರ್‌ 12, 2015ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ. ಸಿರಿಯಾಗೆ ಒಳನುಸುಳುವ ಮೊದಲು, ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದ್ದ ಪಿಎಫ್‌ಐನ ತನ್ನ ಸಹಚರರಿಗೆ ಭಾರತ ಬಿಡಲು ತಿಳಿಸಿದ್ದ. ಆದರೆ, ಮೊಹಮ್ಮದ್‌ ಶಾಜಿ ಮತ್ತು ಕುಟುಂಬ ಮಾತ್ರ ಸಿರಿಯಾ ತಲುಪಿತ್ತು. ಶಾಹಜಹಾನ್‌ ಕುಟುಂಬ ಟರ್ಕಿಯೆದಲ್ಲಿ ಸಿಕ್ಕಿಬಿದ್ದು, ಭಾರತಕ್ಕೆ ವಾಪಸಾಗಿದ್ದ. ಕೆಲ ಸಮಯ ತಟಸ್ಥನಾಗಿದ್ದು ಬಳಿಕ, ಐಎಸ್‌ ಸೇರುವ ಗುರಿಯೊಂದಿಗೆ ನಕಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ.

ಎರಡನೇ ಯತ್ನದಲ್ಲಿ ಮಿದ್ಲಾಜ್‌, ಅಬು ಮಿಸಾಬ್ ಸಹಕಾರದಲ್ಲಿ ಐಎಸ್ ಸೇರಲು ಯತ್ನಿಸಿದ್ದ. ಅಬ್ದುಲ್ ಕಯ್ಯೂಂ, ಅಬ್ದುಲ್‌ ರಜಾಕ್ ಎಂಬವರಿಗೂ ಮನವೊಲಿಸಿದ್ದ. ಈ ಮೂವರ ಪೈಕಿ ಕಯ್ಯೂಂ ಸಿರಿಯಾದಲ್ಲಿ ಹತ್ಯೆಯಾಗಿದ್ದ. ಸಿಕ್ಕಿಬಿದ್ದ ಉಳಿದಿಬ್ಬರನ್ನು ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು. ಭಾರತಕ್ಕೆ ಮರಳುತ್ತಿದ್ದಂತೆ ನವದೆಹಲಿಯಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT