ಪ್ರಯಾಗರಾಜ್: ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರ ವಾದವನ್ನು ಆಲಿಸಿರುವ ಅಲಹಾಬಾದ್ ಹೈಕೋರ್ಟ್, ಮಸೀದಿ ಸಂಕೀರ್ಣದ ಸಮೀಕ್ಷೆ ಹೇಗಿರಬೇಕು ಎಂಬುದರ ಆದೇಶವನ್ನು ನಂತರ ಪ್ರಕಟಿಸುವುದಾಗಿ ಹೇಳಿದೆ.
ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಶಾಹಿ ಈದ್ಗಾದ ಸಮೀಕ್ಷೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲು ಹೈಕೋರ್ಟ್ ಒಪ್ಪಿತ್ತು. ಸಮೀಕ್ಷೆಯು ಹೇಗಿರಬೇಕು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ಚರ್ಚಿಸಬಹುದು ಎಂದು ಹೇಳಿತ್ತು.
ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಗುರುವಾರ ವಿಚಾರಣೆ ಆರಂಭವಾಗುತ್ತಿದ್ದಂತೆ, ಮುಸ್ಲಿಮರ ಪರ ವಕೀಲರು ವಿಚಾರಣೆ ಮುಂದೂಡುವಂತೆ ಕೋರಿದರು. ಸಮೀಕ್ಷೆಗೆ ನೀಡಿರುವ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿಯೊಂದರ ವಿಚಾರಣೆ ಬಾಕಿರುವ ಇರುವ ಕಾರಣ ಈ ವಿಚಾರಣೆಯನ್ನು ಮುಂದೂಡಬೇಕು ಎಂದರು.
ಸಮೀಕ್ಷೆ ನಡೆಸುವ ತಂಡದಲ್ಲಿ ಯಾರಿರಬೇಕು ಎಂಬ ಆದೇಶ ನೀಡಿದಾಕ್ಷಣ ಯಾರಿಗೂ ತೊಂದರೆ ಆಗುವುದಿಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮೀಕ್ಷೆ ತಂಡವನ್ನು ರಚಿಸಬಹುದು ಎಂದು ಹಿಂದೂಗಳ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಪೀಠವು, ಆದೇಶವನ್ನು ನಂತರ ನೀಡಲಾಗುತ್ತದೆ. ಅದನ್ನು ಹೈಕೋರ್ಟ್ನ ಪೋರ್ಟಲ್ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿತು.