ಕೋಲ್ಕತ್ತ: ಸಂದೇಶ್ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪ ಹೊತ್ತಿರುವ ಪಕ್ಷದ ಪ್ರಬಲ ನಾಯಕ ಷಜಹಾನ್ ಶೇಖ್ ಅವರನ್ನು ಏಳು ದಿನಗಳೊಳಗೆ ಬಂಧಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ನ(ಟಿಎಂಸಿ) ಹಿರಿಯ ನಾಯಕ ಕುನಾಲ್ ಘೋಷ್ ತಿಳಿಸಿದ್ದಾರೆ.
ಈ ಕುರಿತಂತೆ ಎಕ್ಸ್ನಲ್ಲಿ ಬರೆದುಕೊಂಡಿರುವ ಕುನಾಲ್, ‘ಷಜಹಾನ್ ಬಂಧನದ ಕುರಿತಂತೆ ಅಭಿಷೇಕ್ ಬ್ಯಾನರ್ಜಿ ಅವರ ಅಭಿಪ್ರಾಯ ಸರಿಯಾಗಿದೆ. ವಿಷಯ ನ್ಯಾಯಾಲಯದಲ್ಲಿದ್ದು, ಪ್ರತಿಪಕ್ಷಗಳು ಈ ವಿಚಾರವಾಗಿ ರಾಜಕೀಯ ಮಾಡುತ್ತಿವೆ. ವಿಷಯ ಸ್ಪಷ್ಟಪಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಅನುಮತಿ ನೀಡಿದ ನ್ಯಾಯಾಲಯಕ್ಕೆ ಧನ್ಯವಾದಗಳು. ಏಳು ದಿನಗೊಳಗೆ ಷಜಹಾನ್ ಅವರನ್ನು ಬಂಧಿಸಲಾಗುವುದು’ ಎಂದರು.
ಪೊಲೀಸರು ದಾಖಲಿಸಿರುವ ಎಫ್ಐಆರ್ಗಳನ್ನು ತಡೆ ಹಿಡಿಯಲಾಗಿದ್ದು, ಕಾನೂನು ತೊಡಕುಗಳಿಂದ ಷಜಹಾನ್ ಅವರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾನುವಾರ ಹೇಳಿದ್ದರು.
ಷಜಹಾನ್ ಮತ್ತು ಆತನ ಬೆಂಬಲಿಗರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಮ್ಮ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ ಸಂದೇಶ್ಖಾಲಿಯ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.