ಇಂಫಾಲ್: ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಮಂಗಳವಾರ ಸ್ಪೀಕರ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಸೋಮವಾರ ನಡೆದಿದ್ದ ಒಂದು ದಿನದವಿಶೇಷ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ ಎಂಟು ಶಾಸಕರಲ್ಲಿ ಈ ಆರು ಮಂದಿಯೂ ಸೇರಿದ್ದರು. ಎನ್.ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿತ್ತು.
ಶಾಸಕ ಒ ಹೆನ್ರಿ ಸಿಂಗ್, ಒನಂ ಲುಖೋಯಿ, ಮೊಹಮ್ಮದ್ ಅಬ್ದುಲ್ ನಸೀರ್, ಪಾನೊಂ ಬ್ರೊಜೆನ್, ಗಮ್ ಥಂಗ್ ಹಾಕಿಪ್, ಗಿನ್ ಸುನಾಹ್ ರಾಜೀನಾಮೆ ಸಲ್ಲಿಸಿದವರಾಗಿದ್ದಾರೆ.
‘ನಮಗೆ ಒ ಇಬೊಬಿ ಸಿಂಗ್ ಅವರ ನಾಯಕತ್ವದಲ್ಲಿ ವಿಶ್ವಾಸವಿಲ್ಲ. ಅವರಿಂದಾಗಿ ಕಾಂಗ್ರೆಸ್ ಸರ್ಕಾರ ರಚಿಸಲು ವಿಫಲವಾಗಿದೆ’ ಎಂದು ರಾಜೀನಾಮೆ ಸಲ್ಲಿಸಿದ ಶಾಸಕರು ಕಾರಣ ಹೇಳಿದ್ದಾರೆ.
‘ರಾಜೀನಾಮೆಯನ್ನು ಸ್ಪೀಕರ್ ಅವನ್ನು ಇನ್ನೂ ಅಂಗೀಕರಿಸಿಲ್ಲ. ನಾವು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದೇವೆ’ ಎಂದು ಹೆನ್ರಿ ಸಿಂಗ್ ತಿಳಿಸಿದ್ದಾರೆ.