ಜಿಲ್ಲೆಯ ಘೋಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪೂರ್ವಾಂಚಲದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಕಾಂಗ್ರೆಸ್ ಘೋಷಿಸಿತು ಹಾಗೂ ಅಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ. ಬಹುಸಂಖ್ಯಾತ ಸಮುದಾಯವನ್ನು ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ‘ಇಂಡಿಯಾ’ ಮೈತ್ರಿಕೂಟ ಬಯಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಪಿ ಮತ್ತು ಕಾಂಗ್ರೆಸ್ ಕುಟುಂಬಗಳು ತಮ್ಮ ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯಿಂದ ಪೂರ್ವಾಂಚಲ ಪ್ರದೇಶವನ್ನು ಮಾಫಿಯಾ, ಬಡತನ ಮತ್ತು ಅಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸಿವೆ ಎಂದು ಮೋದಿ ಹೇಳಿದ್ದಾರೆ.
ಜನರ ಮನೆಗಳಿಗೆ ಬೆಂಕಿ ಹಚ್ಚಿ, ಜನರ ಭೂಮಿಯನ್ನು ಅತಿಕ್ರಮಿಸಿಕೊಂಡು, ಗಲಭೆಕೋರರಿಗೆ ಉತ್ತೇಜನ ನೀಡಿ ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರಿಗೆ ಪೂರ್ವಾಂಚಲಗೆ ಕಾಲಿಡಲು ಬಿಡಬಾರದು ಎಂದು ಅವರು ತಿಳಿಸಿದ್ದಾರೆ.
ಎನ್ಡಿಎ ಪಾಲುದಾರ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷವು (ಎಸ್ಬಿಎಸ್ಪಿ) ಅರವಿಂದ್ ರಾಜ್ಭರ್ ಅವರನ್ನು ಘೋಸಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಬಿಜೆಪಿಯು ಕ್ರಮವಾಗಿ ಬಲ್ಲಿಯಾ ಮತ್ತು ಸೇಲಂಪುರ ಲೋಕಸಭಾ ಕ್ಷೇತ್ರದಿಂದ ನೀರಜ್ ಶೇಖರ್ ಮತ್ತು ರವೀಂದ್ರ ಕುಶ್ವಾಹ ಅವರನ್ನು ಕಣಕ್ಕಿಳಿಸಿದೆ.