ಇಟಾವಾ(ಉತ್ತರ ಪ್ರದೇಶ): ‘ಮೋದಿ ಮತ್ತು ಯೋಗಿಗೆ ಮಕ್ಕಳಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ, ಮತಬ್ಯಾಂಕ್ಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಘೋಷಣೆಗಳು ಸುಳ್ಳಾಗಿದ್ದು, ಅವುಗಳ ಉದ್ದೇಶವೂ ಸರಿಯಿಲ್ಲ’ ಎಂದರು.
‘ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ತಮ್ಮ ಕುಟುಂಬ ಮತ್ತು ಅವರ ಮತ ಬ್ಯಾಂಕ್ಗಳಿಗೆ ಲಾಭ ಮಾಡಿಕೊಡಲು ಮಾತ್ರ ಕೆಲಸ ಮಾಡುತ್ತಾರೆ’ ಎಂದು ಆರೋಪಿಸಿದರು.
ಕೋವಿಡ್–19 ಲಸಿಕೆ ಕುರಿತಂತೆ ಸಮಾಜವಾದಿ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಪ್ರಧಾನಿ, ‘ಲಸಿಕೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಸಮಾಜವಾದಿ ಪಕ್ಷದ ಮುಖಂಡರು ಜನರನ್ನು ಪ್ರಚೋದಿಸುತ್ತಿದ್ದಾರೆ. ಆದರೆ ತಾವುಗಳು ರಹಸ್ಯವಾಗಿ ಲಸಿಕೆ ಹಾಕಿಕೊಂಡಿದ್ದಾರೆ’ ಎಂದರು.