ನವದೆಹಲಿ: ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನ ನಿಯಮ–2022ಕ್ಕೆ ತಿದ್ದುಪಡಿ ತಂದಿದ್ದು, ವಿವಾಹಿತ ಜೋಡಿಯಲ್ಲಿ ಒಬ್ಬರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂತಹವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಸರ್ಕಾರ, 'ದಂಪತಿಯ ಪೈಕಿ ಪತಿ ಇಲ್ಲವೇ ಪತ್ನಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಜಿಲ್ಲಾ ವೈದ್ಯಕೀಯ ಮಂಡಳಿ ಪ್ರಮಾಣಿಕರಿಸಬೇಕು. ನಂತರವಷ್ಟೇ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಮುಂದುವರಿಯಲು ಅವಕಾಶವಿರುತ್ತದೆ' ಎಂದು ಸ್ಪಷ್ಟವಾಗಿ ತಿಳಿಸಿದೆ.
ದಂಪತಿಯಲ್ಲಿ ಕನಿಷ್ಠ ಒಬ್ಬರ ವಂಶವಾಹಿ, ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವಿನಲ್ಲಿ ಇರಬೇಕು ಎಂಬ ನಿಯಮದ ಆಧಾರದಲ್ಲಿ ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ವೈದ್ಯಕೀಯ ಸಮಸ್ಯೆ ಹೊಂದಿದ್ದರೆ ಅಥವಾ ತಮ್ಮದೇ ವಂಶವಾಹಿ ಉತ್ಪಾದಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಸಾಧ್ಯವಿಲ್ಲ.