ನವದೆಹಲಿ: ಅಂಕಣಕಾರ ಹಾಗೂ ಪತ್ರಕರ್ತ ಸ್ವಪನ್ ದಾಸ್ಗುಪ್ತ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪುನಃ ನಾಮನಿರ್ದೇಶನ ಮಾಡಲಾಗಿದ್ದು, ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಘು ಮೊಹಪಾತ್ರ ಅವರ ನಿಧನದಿಂದ ಖಾಲಿಯಾದ ರಾಜ್ಯಸಭಾ ಸ್ಥಾನಕ್ಕೆ ಹೆಸರಾಂತ ವಕೀಲ ಮಹೇಶ್ ಜೇಠ್ಮಲಾನಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಮಹೇಶ್ ಜೇಠ್ಮಲಾನಿ
2022ರ ಏಪ್ರಿಲ್ ವರೆಗೂ ಸ್ವಪನ್ ದಾಸ್ಗುಪ್ತ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಪಶ್ಚಿಮ ಬಂಗಾಳದ ತಾರಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ವಪನ್ ದಾಸ್ಗುಪ್ತ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಮಾರ್ಚ್ನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ತಾರಕೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ವಪನ್ ಅವರು ಟಿಎಂಸಿ ಅಭ್ಯರ್ಥಿ ರಮೆಂದು ಸಿನ್ಹಾರಾಯ್ ಎದುರು ಸೋಲು ಕಂಡರು.
ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿರುವವರು ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವೆ? ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಚುನಾವಣೆಗೂ ಮುನ್ನ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಅದರ ಬೆನ್ನಲ್ಲೇ ಸ್ವಪನ್ ದಾಸ್ಗುಪ್ತ ರಾಜೀನಾಮೆ ಸಲ್ಲಿಸಿದ್ದರು.
ವಿವಿಧ ಕ್ಷೇತ್ರಗಳ ಖ್ಯಾತ ವ್ಯಕ್ತಿಗಳನ್ನು ಸರ್ಕಾರದ ಸಲಹೆಯ ಮೇರೆಗೆ ರಾಷ್ಟ್ರಪತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ.