ಚೆನ್ನೈ: ತಮ್ಮ ಜನನದ ಬಗ್ಗೆ ಡಿಎಂಕೆ ಮುಖಂಡ ಎ.ರಾಜಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ನೆನೆದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗದ್ಗದಿತರಾಗಿದ್ದಾರೆ. ತಾಯಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಯಾರೇ ಮಹಿಳೆಯರನ್ನು ಅವಹೇಳನ ಮಾಡಿದರೂ ಅವರನ್ನು ದೇವರು ಶಿಕ್ಷಿಸುತ್ತಾನೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಸ್ಪರ್ಧಿಸುತ್ತಿರುವ ಚೆಪಾಕ್-ತಿರುವಳ್ಳಿಕೆಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭ, ಎ. ರಾಜಾ ತಮ್ಮ ನಾಯಕ ಸ್ಟಾಲಿನ್ ಅವರನ್ನು ಹೊಗಳುವ ಭರದಲ್ಲಿ ‘ಸ್ಟಾಲಿನ್ ಅವರು ಉತ್ತಮ ಸಂಬಂಧದಿಂದ, ನಾರ್ಮಲ್ ಡೆಲಿವರಿ ಮೂಲಕ ಜನಿಸಿದ್ದಾರೆ. ಆದರೆ, ಪಳನಿಸ್ವಾಮಿ ಜನಿಸಿದ್ದು ಅಕ್ರಮ ಸಂಬಂಧದಿಂದ ಮತ್ತು ಅದು ಅಕಾಲಿಕ ಜನನ’ ಎಂದು ಅವಹೇಳನ ಮಾಡಿ ಹೀಯಾಳಿಸಿದ್ದರು.
ಈ ಕುರಿತಂತೆ, ಉತ್ತರ ಚೆನ್ನೈ,ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪಳನಿಸ್ವಾಮಿ, ಎ.ರಾಜಾ ಹೇಳಿಕೆ ನೆನೆದು ಗದ್ಗದಿತರಾದರು. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಬಗ್ಗೆಯೇ ಅಂತಹ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡುತ್ತಾರೆಂದರೆ, ಇಂತಹವರು ಅಧಿಕಾರಕ್ಕೆ ಬಂದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ಯೋಚಿಸಿ, ನಮ್ಮ ಮಹಿಳೆಯರು ಮತ್ತು ತಾಯಂದಿರು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ?" ಎಂದು ಹೇಳಿದ್ದಾರೆ.
ಇದನ್ನೂ ಓದಿ.. ದಕ್ಷಿಣ ತಮಿಳುನಾಡು: ಎಐಎಡಿಎಂಕೆಗೆ ಜಾತಿ ಧ್ರುವೀಕರಣದ ಏಟು
ಇದೇವೇಳೆ, ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡುವ ಎ.ರಾಜನಂತಹವರಿಗೆ ಚುನಾವಣೆಯಲ್ಲಿ 'ಸರಿಯಾದ ಶಿಕ್ಷೆ' ವಿಧಿಸಬೇಕೆಂದು ಪಳನಿಸ್ವಾಮಿ ಮತದಾರರಿಗೆ ಮನವಿ ಮಾಡಿದರು. ಶ್ರೀಮಂತನಾಗಿರಲಿ, ಬಡವನಾಗಿರಲಿ, ತಾಯಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ನೀಡಲಾಗುತ್ತದೆ. ತಾಯಿ ಅಥವಾ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವನು ದೇವರಿಂದ ಖಚಿತವಾಗಿ ಶಿಕ್ಷಿಸಲ್ಪಡುತ್ತಾನೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಪಳನಿಸ್ವಾಮಿ ನೀಡಿದ ದೂರಿನ ಮೇಲೆ ಎ. ರಾಜಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ, ಎ. ರಾಜ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಎಐಎಡಿಎಂಕೆ, ಪಿಎಂಕೆ ಸೇರಿದಂತೆ ಮಿತ್ರ ಪಕ್ಷಗಳ ಕಾರ್ಯಕರ್ತರು ಭಾನುವಾರ ತಮಿಳುನಾಡಿನ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.