ಹೈದರಾಬಾದ್: ಹಣ ದುರುಪಯೋಗ ಪ್ರಕರಣದಲ್ಲಿ ನ್ಯಾಯಂಗ ಬಂಧನಕ್ಕೆ ಒಳಗಾಗಿರುವ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ಸೋಮವಾರ ಮುಂಜಾನೆ ರಾಜಮಹೇಂದ್ರವರಂನಲ್ಲಿರುವ ಕೇಂದ್ರ ಕಾರಾಗೃಹಕ್ಕೆ ತಲುಪಿದ್ದಾರೆ.
ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪದ ಮೇಲೆ ಚಂದ್ರಬಾಬು ಅವರನ್ನು ಸಿಐಡಿ ಪೊಲೀಸರು ಶನಿವಾರ ನಂದ್ಯಾಲದಲ್ಲಿ ಬಂಧಿಸಿದ್ದರು.
ಚಂದ್ರಬಾಬು ನಾಯ್ಡು ವಿರುದ್ದ ಹೊರಿಸಲಾದ ಆರೋಪಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು, ತನಿಖೆಗೆ 24 ಗಂಟೆ ಸಾಲುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಅವರು, ಬಂಧನದ ವೇಳೆ ನಾಯ್ಡು ಅವರಿಗೆ ಪ್ರತ್ಯೇಕ ಕೊಠಡಿ, ಮನೆ ಆಹಾರ ಮತ್ತು ಔಷಧಿ ನೀಡುವಂತೆ ಸೂಚಿಸಿದ್ದಾರೆ.
ಚಂದ್ರಬಾಬು ಅವರ ಜೊತೆ ಕೇಂದ್ರ ಕಾರಾಗೃಹಕ್ಕೆ ಅವರ ಮಗ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ತೆರಳಿದ್ದು, ಜೈಲಿನ ಗೇಟಿನವರೆಗೂ ತಂದೆಯ ಬಳಿಯೇ ನಿಂತಿದ್ದರು. ಚಂದ್ರಬಾಬು ಅವರು ಜೈಲಿನೊಳಗೆ ತೆರಳಿದ ಮೇಲೂ ಲೋಕೇಶ್ ಅವರು ಸ್ವಲ್ಪ ಕಾಲ ಅಲ್ಲೇ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಸರ್ಕಾರಿ ನಿವೃತ್ತ ನೌಕರರಾದ ಜಿ. ಸುಬ್ಬರಾವ್ ಹಾಗೂ ಕೆ. ಲಕ್ಷ್ಮಿನಾರಾಯಣ ಈ ಪ್ರಕರಣದಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಆರೋಪಿಯಾಗಿದ್ದಾರೆ.ಚಂದ್ರಬಾಬು ಅವರು 37ನೇ ಆರೋಪಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.