ಚಿಂತೆಯಿಲ್ಲ– ಅಜರುದ್ದೀನ್: ಎಐಎಂಐಎಂ ಅಭ್ಯರ್ಥಿಯನ್ನು ತಮ್ಮ ವಿರುದ್ಧ ಕಣಕ್ಕಿಳಿಸಿದರೆ ತಮಗೆ ಚಿಂತೆಯೇನೂ ಇಲ್ಲ. ಜುಬ್ಲಿ ಹಿಲ್ಸ್ ಜನರು ತಮ್ಮೊಂದಿಗೆ ಇದ್ದಾರೆ ಎಂದು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜರುದ್ದೀನ್ ಹೇಳಿದ್ದಾರೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಎಐಎಂಐಎಂ ಅಭ್ಯರ್ಥಿಯು ಕಾಂಗ್ರೆಸ್ ಮತಗಳನ್ನು ಒಡೆಯುವ ಸಂಭವ ಇದೆ. ಎಐಎಂಐಎಂ ಜ್ಯುಬ್ಲಿ ಹಿಲ್ಸ್ ಕ್ಷೇತ್ರದಿಂದ ಮೊಹಮ್ಮದ್ ರಶೆದ್ ಫರಾಜುದ್ದೀನ್ ಅವರನ್ನು ಕಣಕ್ಕಿಳಿಸಿದ್ದರೆ ಶಾಸಕ ಎಂ. ಗೋಪಿನಾಥ್ ಅವರು ಬಿಆರ್ಎಸ್ನಿಂದ ಸ್ಪರ್ಧಿಸಿದ್ದಾರೆ.
* ಜನಸೇನಾ ಅಭ್ಯರ್ಥಿಗಳ ಪಟ್ಟಿ: ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡ ಬಳಿಕ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ತೆಲಂಗಾಣದ ವಿಧಾನಸಭೆ ಚುನಾವಣೆಗಾಗಿ ಎಂಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಪಕ್ಷದ ಏಕೈಕ ಮಹಿಳಾ ಅಭ್ಯರ್ಥಿ ಎಂ. ಉಮಾದೇವಿ ಅವರಿಗೆ ಅಸ್ವರಾವ್ಪೇಟಾ (ಎಸ್ಟಿ) ಕ್ಷೇತ್ರದಿಂದ ಟಿಕೆಟ್ ನೀಡಿದ್ದರೆ, ಪಕ್ಷದ ತೆಲಂಗಾಣದ ಉಸ್ತುವಾರಿ ಶಂಕರ್ ಗೌಡ್ ಅವರು ತಾಂಡೂರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
* ತನಿಖೆಗೆ ಆದೇಶ: ಜೈಪುರ ಜಿಲ್ಲೆಯ ನಾಗೌರ್ನಲ್ಲಿ ಮಂಗಳವಾರ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಕಿಡಿ ಸಿಡಿದ ಬಗ್ಗೆ ರಾಜಸ್ಥಾನ ಸರ್ಕಾರ ತನಿಖೆಗೆ ಆದೇಶಿಸಿದೆ.
ಶಾ ಸೇರಿದಂತೆ ಎಲ್ಲರೂ ಸುರಕ್ಷಿತರಾಗಿದ್ದಾರೆ. ಶಾ ಅವರನ್ನು ನಂತರ ಬೇರೆ ವಾಹನದಲ್ಲಿ ಕರೆದೊಯ್ಯಲಾಗಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ.
* ಇ.ಡಿ ದಾಳಿ: ತಮ್ಮ ಚುನಾವಣಾ ವೆಚ್ಚದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿರುವ ಸುರೇಶ್ ಧಿಂಗಾನಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು (ಇ.ಡಿ)ಕಳುಹಿಸಿದೆ ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಹೇಳಿದ್ದಾರೆ.
ತಮ್ಮ ಕ್ಷೇತ್ರದ ಜನರಲ್ಲಿ ಭೀತಿ ಹುಟ್ಟಿಸುವ ಕ್ರಮ ಇದಾಗಿದೆ ಎಂದಿರುವ ಅವರು ‘ಛತ್ತೀಸಗಢದ ಜನರು ದುರ್ಬಲರು, ಹೇಡಿಗಳು ಎಂದು ಭಾವಿಸಬೇಡಿ’ ಎಂದು ಹೇಳಿದ್ದಾರೆ.
* ಗದ್ದರ್ ಮಗಳ ಆಶ್ವಾಸನೆ: ‘ನಾನು ಆಯ್ಕೆಯಾದರೆ ಜನರ ಮನೆ ಬಾಗಿಲ ಬಳಿ ಇರುತ್ತೇನೆ. ಎಲ್ಲಿಯೋ ಇರುವ ಶಾಸಕರ ಕಚೇರಿಗೆ ಜನರು ಬರುವ ಅವಶ್ಯಕತೆ ಇಲ್ಲ. ನಾನು ಒಂದು ವಾರ್ಡ್ನಲ್ಲಿ ನೆಲೆಸಿ ಜನರಿಗೆ ಯಾವಾಗಲೂ ಲಭ್ಯವಿರುತ್ತೇನೆ’ ಎಂದು ಕಾಂತ್ರಿಕಾರಿ ಗಾಯಕ ಗದ್ದರ್ ಅವರ ಮಗಳು ಜಿ.ವಿ. ವೆನೆಲಾ ಜನರಿಗೆ ಆಶ್ವಾಸನೆ ನೀಡಿದ್ದಾರೆ.
ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ (ಎಸ್ಸಿ ಮೀಸಲು) ಕಾಂಗ್ರೆಸ್ನಿಂದ ಅವರು ಸ್ಪರ್ಧಿಸಿದ್ದಾರೆ. ಬಿಆರ್ಎಸ್ ಮಾಜಿ ಶಾಸಕ ದಿ. ಜಿ. ಸಾಯನ್ನಾ ಅವರ ಮಗಳು ಜಿ.ಲಾಸ್ಯ ನಂದಿತಾ ಅವರು ಬಿಆರ್ಎಸ್ನಿಂದ ಕಣದಲ್ಲಿದ್ದಾರೆ. ಇಲ್ಲಿಗೆ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಘೋಷಿಸಬೇಕಿದೆ.
* ಪ್ರಿಯಾಂಕಾ ಟೀಕೆ: ಸರ್ಕಾರದ ನಿಯಂತ್ರಣದಲ್ಲಿದ್ದ ಕಂಪನಿಗಳನ್ನು ಕೇಂದ್ರ ಸರ್ಕಾರವು ಈಗ ಉದ್ದಿಮೆದಾರರಿಗೆ ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಟೀಕಿಸಿದರು.
ಭೋಪಾಲ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಐಐಎಂ ಮತ್ತು ಎಐಐಎಂಎಸ್ನಂತಹ ದೊಡ್ಡ ಆಸ್ಪತ್ರೆಗಳನ್ನು ಕಾಂಗ್ರೆಸ್ ಸ್ಥಾಪಿಸಿತು. ಇಂತಹ ಸಂಸ್ಥೆಗಳು ದೇಶದ ಪ್ರಗತಿಗೆ ಕಾರಣವಾಗುತ್ತದೆ ಎಂದು ನೆಹರೂ ನಂಬಿದ್ದರು. ಆದರೆ ಈಗ ಸರ್ಕಾರದ ನಿಯಂತ್ರಣದಲ್ಲಿದ್ದ ಸಂಸ್ಥೆಗಳನ್ನು ಉದ್ಯಮಿಗಳಿಗೆ ಹಸ್ತಾಂತರಿವುದು, ಜನರ ಜೇಬಿನಿಂದ ಹಣ ಕಸಿಯುವುದೇ ಬಿಜೆಪಿಯ ನೀತಿಯಾಗಿದೆ ಎಂದು ಆರೋಪಿಸಿದರು.
* ಪೊಲೀಸ್ಗಾಗಿ ಶೋಧ: ಮಿಜೋರಾಂ ಚುನಾವಣಾ ಕರ್ತವ್ಯದಲ್ಲಿದ್ದ ಅಸ್ಸಾಂ ಪೊಲೀಸರೊಬ್ಬರು ಭಾನುವಾರದಿಂದ ಕಾಣೆಯಾಗಿದ್ದು ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಸ್ಸಾಂ ಪೊಲೀಸ್ ಪಡೆಯ 9ನೇ ಬೆಟಾಲಿಯನ್ನ ಕಾನ್ಸ್ಟೆಬಲ್ ಸಬಿನ್ ನಾಥ್ ಅವರು ಮಣಿಪುರ ಗಡಿ ಬಳಿಯ ಗೊಪಾ ಗ್ರಾಮದಿಂದ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.