ಕೋಲ್ಕತ್ತ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗಳು ನಡೆದಿದ್ದ ಸಂದೇಶ್ಖಾಲಿಗೆ ಪಶ್ಚಿಮ ಬಂಗಾಳದ ಮೂವರು ಸಚಿವರು ಭಾನುವಾರ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿ, ಕುಂದುಕೊರತೆ ಆಲಿಸಿದರು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಗೆ ಸೇರಿದ ಕೆಲವರಿಂದ ತಮ್ಮ ಭೂ ಕಬಳಿಕೆ ಆಗಿದೆ ಎಂದು ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಶಿಬಿರ ತೆರೆದು, ಜನರಿಂದ ಅಹವಾಲು ಸ್ವೀಕರಿಸಿತು.
ಮಮತಾ ಬ್ಯಾನರ್ಜಿ ಸಂಪುಟದ ಸಚಿವರಾದ ಪಾರ್ಥ ಭೌಮಿಕ್, ಸುಜಿತ್ ಬೋಸ್ ಮತ್ತು ಬಿರ್ಬಾಹಾ ಹಾಂಸ್ದಾ ಅವರ ನಿಯೋಗವು ಇಲ್ಲಿನ ಕಾಳಿನಗರದಲ್ಲಿ ಜನರೊಂದಿಗೆ ಮಾತುಕತೆ ನಡೆಸಿತು. ಈ ವೇಳೆ ಸಂದೇಶ್ಖಾಲಿಯ ಟಿಎಂಸಿ ಶಾಸಕ ಸುಕುಮಾರ್ ಮಹತಾ ಅವರೂ ಇದ್ದರು.
‘ಇಲ್ಲಿನ ಜನರು ಮತ್ತು ಪಕ್ಷದ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಲು ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ಸಚಿವ ಬೋಸ್ ಸುದ್ದಿಗಾರರಿಗೆ ತಿಳಿಸಿದರು.
ಸಂದೇಶ್ಖಾಲಿಗೆ ಭೇಟಿ ನೀಡಲು ಬಂದಿದ್ದ ಕೇಂದ್ರ ಸಚಿವರನ್ನು ಒಳಗೊಂಡಿದ್ದ ಬಿಜೆಪಿ ನಿಯೋಗಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿತ್ತು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪಗಳು ವ್ಯಕ್ತವಾದ ಬಳಿಕ ಸಂದೇಶ್ಖಾಲಿಯ ಗ್ರಾಮಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಇದಾದ ಬಳಿಕ ಇಲ್ಲಿನ 19 ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.