ಜಮ್ಮು: ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರ ಹತ್ಯೆ ಪ್ರಕರಣ ಸೇರಿ ನಾಲ್ಕು ಪ್ರತ್ಯೇಕ ಕೃತ್ಯಗಳಿಗೆ ಸಂಬಂಧಿಸಿದಂತೆ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಂಧಿತರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು.
‘ಹತ್ಯೆ ಸಂಚು ರೂಪಿಸಿದ್ದ ನಿಸಾರ್ ಅಹ್ಮದ್ ಶೇಖ್, ನಿಶಾದ್ ಅಹ್ಮದ್, ಅಜದ್ ಹುಸೈನ್ ಬಂಧಿತರು. ಎಲ್ಲರೂ ಕಿಶ್ತ್ವಾರ್ ಜಿಲ್ಲೆಯವರು. 2018ರ ನವೆಂಬರ್ನಿಂದ ಇಲ್ಲಿಯವರೆಗೆ ನಡೆದ ಕೃತ್ಯಗಳಿಗೆ ಸಂಬಂಧಿಸಿ ಬಂಧಿಸಲಾಗಿದೆ’ ಎಂದು ಐಜಿಪಿ ಮುಕೇಶ್ ಸಿಂಗ್ ತಿಳಿಸಿದರು.
‘ಇನ್ನೊಬ್ಬ ಸಕ್ರಿಯ ಕಾರ್ಯಕರ್ತನ ಬಂಧನಕ್ಕೆ ಯತ್ನ ಮುಂದು ವರಿದಿದೆ. ಈತ 2017–18ನೇ ಸಾಲಿನಲ್ಲಿ ಜೆನಾಬ್ ಕಣಿವೆಯಲ್ಲಿ ಸಂಘಟನೆ ಬಲಪಡಿಸಲು ಒತ್ತು ನೀಡಿದ್ದ’ ಎಂದು ತಿಳಿಸಿದರು.