ಅಗರ್ತಲಾ: 2023ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರನ್ನು ಜೀವಂತವಾಗಿ ಹೂಳಲು ಸಿಪಿಐ(ಎಂ) ಪಕ್ಷವು ಗುಂಡಿಗಳನ್ನು ತೋಡಿತ್ತು ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಮಂಗಳವಾರ ಆರೋಪಿಸಿದ್ದಾರೆ.
ಕೋವೈ ಜಿಲ್ಲೆಯ ಬಜರಾರ್ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾ, ಬಿಜೆಪಿಯು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರುತ್ತಿದ್ದಂತೆಯೇ ಕಮ್ಯುನಿಸ್ಟ್ ಪಕ್ಷದ ಈ ಸಂಚು ವಿಫಲಗೊಂಡಿತು ಎಂದಿದ್ದಾರೆ.
'2023ರ ಫೆಬ್ರುವರಿಯಲ್ಲಿ ನಡೆದ ವಿಧಾನಸಭೆ ಚುಣಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಸಿಪಿಐ(ಎಂ) ಪಕ್ಷದವರು, ಬಿಜೆಪಿಯ ಆಯ್ದ ಕೆಲವು ನಾಯಕರು ಮತ್ತು ಕಾರ್ಯಕರ್ತರನ್ನು ಜೀವಂತವಾಗಿ ಹೂಳಲು ಹಾಗೂ ಕೊಲೆ ಮಾಡುವ ಸಲುವಾಗಿ ಗುಂಡಿಗಳನ್ನು ತೋಡಿದ್ದರು. ಆದರೆ, ಚುನಾವಣಾ ಕದನದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಕಾರಣ ಅವರ ಸಂಚು ವಿಫಲಗೊಂಡಿತು' ಎಂಬ ಗಂಭೀರ ಆರೋಪ ಮಾಡಿದ್ದಾರೆ.
ನಿಷೇಧಿತ ಸಂಘಟನೆ ನ್ಯಾಷನಲಿಸ್ಟ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ) ಉಗ್ರರಿಂದ, 1996ರ ಡಿಸೆಂಬರ್ 12ರಂದು ಮೃತಪಟ್ಟಿದ್ದ 26 ಮಂದಿಗೆ ಗೌರವ ಸಲ್ಲಿಸುವ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾ ಭಾಗವಹಿಸಿದ್ದರು.
'ಈಶಾನ್ಯ ರಾಜ್ಯಗಳಲ್ಲಿ ಉಗ್ರರ ತಂತ್ರಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಿಪಿಐ(ಎಂ) ಕ್ಷಮಿಸಲಸಾಧ್ಯವಾದ ತಪ್ಪು ಮಾಡುತ್ತಿದೆ' ಎಂದೂ ದೂರಿರುವ ಸಹಾ, 'ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕೂಡ ಎಡಪಕ್ಷದೊಂದಿಗೆ ಕೈಜೋಡಿಸಿದ್ದು ವಿಷಾದದ ಸಂಗತಿ' ಎಂದಿದ್ದಾರೆ.
ಮುಖ್ಯಮಂತ್ರಿ ಮಾಡಿರುವ ಆರೋಪಗಳನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಅವರು ಅಲ್ಲಗಳೆದಿದ್ದಾರೆ. ತಮ್ಮ ಪಕ್ಷಕ್ಕೆ ಹಿಂಸಾಚಾರ ಅಥವಾ ಉಗ್ರ ತಂತ್ರಗಳಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.
'2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ 40ಕ್ಕಿಂತಲೂ ಕಡಿಮೆ ಮತಗಳು ಪಡೆದಿದೆ. ಹಾಗಾಗಿ ಆ ಪಕ್ಷವು ಜನಪ್ರಿಯ ಬಹುಮತವನ್ನು ಗಳಿಸಿಲ್ಲ. ಬದಲಾಗಿ ಮತ ವಿಭಜನೆಯ ಲಾಭ ಪಡೆದು ಸರ್ಕಾರ ರಚಿಸಿದೆ. ಆತಂಕದಲ್ಲಿರುವ ಆ ಪಕ್ಷದವರು, ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಚೌಧರಿ ತಿರುಗೇಟು ನೀಡಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.