ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಮಿದುಳು ನಿಷ್ಕ್ರಿಯಗೊಂಡಿದ್ದ 22 ವರ್ಷದ ವಿದ್ಯಾರ್ಥಿ ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ 8 ಮಂದಿಗೆ ನೆರವಾಗಿದ್ದಾನೆ.
ಸೇಲಂ ಮೂಲದ ವಿದ್ಯಾರ್ಥಿ ಎಸ್.ವಿ. ದಿನೇಶ್ಗೆ ಕೊಯಮತ್ತೂರಿನಿಂದ 35 ಕಿ.ಮೀ ದೂರದ ಅಣ್ಣೂರ್ ಬಳಿ ಜೂನ್ 18ರಂದು ಅಪಘಾತವಾಗಿತ್ತು.
ಪ್ರಾಥಮಿಕ ಚಿಕಿತ್ಸೆ ಬಳಿಕ ಕೆಎಂಎಸಿಎಚ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದ ಕಾರಣ ಜೂನ್ 20ರಂದು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು.
ಬಳಿಕ, ಮಗ ಮೃತಪಟ್ಟ ಬಳಿಕವೂ ಇತರರಿಗೆ ನೆರವಾಗಬೇಕೆಂದು ಬಯಸಿದ ತಂದೆ ವೆಂಕಟೇಶ್ವರನ್ ಮತ್ತು ತಾಯಿ ಶಾಂತಿ ಮಗನ ಕಿಡ್ನಿ, ಲಿವರ್, ಕಣ್ಣುಗಳು, ಚರ್ಮ ಮತ್ತು ಮೂಳೆಗಳನ್ನು ದಾನ ಮಾಡಿದ್ದಾರೆ ಎಂದು ತಮಿಳುನಾಡಿನ ಅಂಗಾಂಗ ಕಸಿ ಪ್ರಾಧಿಕಾರ ಹೇಳಿದೆ.
ವಿದ್ಯಾರ್ಥಿ ದಿನೇಶ್ ಅಂಗಾಂಗಳನ್ನು 8 ಮಂದಿ ರೋಗಿಗಳಿಗೆ ಕಸಿ ಮಾಡಲಾಗಿದೆ.