ನವದೆಹಲಿ: ವಿಮಾನದಲ್ಲಿ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಮಗುವಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೈದ್ಯರು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ರಾಂಚಿ– ದೆಹಲಿ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಶನಿವಾರ ನಡೆದಿದೆ.
ಐಎಎಸ್ ಅಧಿಕಾರಿ ಮತ್ತು ವೈದ್ಯ ತರಬೇತಿಯನ್ನೂ ಪಡೆದಿರುವ ಡಾ. ನಿತಿನ್ ಕುಲಕರ್ಣಿ ಮತ್ತು ರಾಂಚಿಯ ಸರ್ದಾರ್ ಆಸ್ಪತ್ರೆಯ ವೈದ್ಯ ಡಾ ಮುಜಾಮಿಲ್ ಸೇರಿ ಮಗುವಿಗೆ ತುರ್ತು ವೈದ್ಯಕೀಯ ಸಹಾಯವಾಗಿ ವಯಸ್ಕರಿಗೆ ಮೀಸಲಾದ ಮುಖವಾಡವನ್ನು ಬಳಸಿಕೊಂಡು ಆಮ್ಲಜನಕದ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ತಮ್ಮ ಕಿಟ್ನಲ್ಲಿದ್ದ ಚುಚ್ಚುಮದ್ದು ನೀಡಿ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
1 ಗಂಟೆಯ ಬಳಿಕ ವಿಮಾನ ಲ್ಯಾಂಡ್ ಆದ ಕೂಡಲೇ ವೈದ್ಯಕೀಯ ಸಿಬ್ಬಂದಿ ಮಗುವಿಗೆ ಆಮ್ಲಜನಕ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೋಷಕರು ರಾಂಚಿಯಿಂದ ಮಗುವನ್ನು ದೆಹಲಿಯ ಏಮ್ಸ್ಗೆ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಮಗುವಿನ ಜೀವ ಉಳಿಸಿದ ವೈದ್ಯರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.