ಚೆನ್ನೈ (ಪಿಟಿಐ): ‘ಹಿಂದಿ ಭಾಷೆಯು ಇಡೀ ಭಾರತ ಒಕ್ಕೂಟವನ್ನು ಒಂದುಗೂಡಿಸಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯು ಅಸಂಬದ್ಧವಾದುದು’ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರು ಟೀಕಿಸಿದ್ದಾರೆ.
‘ಹಿಂದಿಯನ್ನು ಕೇವಲ 4–5 ರಾಜ್ಯಗಳಲ್ಲಿ ಮಾತ್ರವೇ ಮಾತನಾಡಲಾಗುತ್ತದೆ. ಹಿಂದಿ ಜನರನ್ನು ಒಗ್ಗೂಡಿಸುತ್ತದೆ, ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ತುಂಬಲಿದೆ ಎಂದು ಹೇಳಿ, ಎಂದಿನಂತೆ ಹಿಂದಿ ಭಾಷಾ ಪ್ರೇಮ ಮೆರೆದಿದ್ದಾರೆ’ ಎಂದು ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.
‘ಶಾ ಹೇಳಿಕೆ ಗೊಂದಲ ಮೂಡಿಸುವ ಇನ್ನೊಂದು ಕ್ರಮ’ ಎಂದು ಎಕ್ಸ್ ವೇದಿಕೆಯಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳ ಬಳಕೆಯಲ್ಲಿರುವ ಭಾಷೆ. ಹಿಂದಿ ಈ ಎರಡು ರಾಜ್ಯಗಳನ್ನು ಹೇಗೆ ಒಗ್ಗೂಡಿಸಲಿದೆ’ ಎಂದು ಪ್ರಶ್ನಿಸಿದ್ದಾರೆ.
ಹಿಂದಿ ದಿವಸ ನಿಮಿತ್ತ ನೀಡಿದ್ದ ಸಂದೇಶದಲ್ಲಿ ಶಾ ಅವರು, ಹಿಂದಿ ಭಾಷೆಯೂ ಯಾವುದೇ ಭಾರತೀಯ ಭಾಷೆ ಜೊತೆಗೆ ಸ್ಪರ್ಧಿಸುವುದಿಲ್ಲ. ತನ್ನ ಭಾಷೆಗಳನ್ನು ಬಲಪಡಿಸುವುದರಿಂದ ಮಾತ್ರವೇ ಶಕ್ತಿಯುತ ರಾಷ್ಟ್ರ ನಿರ್ಮಾಣವಾಗಲಿದೆ ಎಂದು ಹೇಳಿದ್ದರು.