ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಗಡಿಪಾರು ಮಾಡಿ: ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಆದೇಶ

Last Updated 10 ಡಿಸೆಂಬರ್ 2018, 18:39 IST
ಅಕ್ಷರ ಗಾತ್ರ

ಲಂಡನ್‌: ಭಾರತೀಯ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ಸಾಲ ಮರುಪಾವತಿಸದೆ ವಂಚಿಸಿರುವಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಬ್ರಿಟನ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಇದರಿಂದಾಗಿ ಮಲ್ಯಗೆ ಭಾರಿ ಹಿನ್ನಡೆ ಆಗಿದೆ.

‘ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲು ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು. ಅವರ ವಿರುದ್ಧ ದಾಖಲಾಗಿರುವಪ್ರಕರಣಗಳುಸುಳ್ಳು ಎನ್ನುವುದಕ್ಕೆ ಸಾಕ್ಷಿ ಇಲ್ಲ. ಗಡಿಪಾರಿನಿಂದ ಅವರ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ’ಎಂದುವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುಥ್ನಾಟ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ತೀರ್ಪನ್ನು ಅವರು ವಿದೇಶಾಂಗ ಸಚಿವರಿಗೆ ರವಾನಿಸಿದ್ದು, ಇದನ್ನು ಸಚಿವರು ಸಹ ಅಂಗೀಕರಿಸಬೇಕಿದೆ.

2016ರ ಮಾರ್ಚ್ 2ರಂದು ಮಲ್ಯ ದೇಶ ತೊರೆದು ಬ್ರಿಟನ್‌ ಸೇರಿಕೊಂಡಿದ್ದರು. ಅವರ ವಿರುದ್ಧಗಡಿಪಾರು ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ 2017ರ ಏಪ್ರಿಲ್‌ 19ರಂದುಬ್ರಿಟನ್ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಈ ಜಾಮೀನಿನ ಷರತ್ತುಗಳೇ ಮುಂದೆಯೂ ಅನ್ವಯವಾಗುತ್ತವೆ ಎಂದು ಅರ್ಬುಥ್ನಾಟ್ ತೀರ್ಪಿನಲ್ಲಿ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಮಲ್ಯ: ‘ನಾನು ಹಣ ವಂಚಿಸಿದ್ದೇನೆ ಎನ್ನುವ ಆರೋಪವನ್ನು ನಿರಾಕರಿಸಲು ಬಯಸುತ್ತೇನೆ.ಬ್ಯಾಂಕ್‌ಗಳಿಗೆ ಸಾಲದ ಅಸಲು ಪಾವತಿಸಲು ಸಿದ್ಧವಿದ್ದೇನೆ. ಇದು ಸುಳ್ಳಲ್ಲ’ ಎಂದು ಮಲ್ಯಪ್ರತಿಕ್ರಿಯಿಸಿದ್ದಾರೆ.

ತೀರ್ಪು ಪರಿಶೀಲಿಸಿದ ಬಳಿಕ ನನ್ನ ವಕೀಲರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

‘ಪ್ರಕರಣವೊಂದನ್ನು ಇತ್ಯರ್ಥಗೊಳಿಸಿಕೊಳ್ಳುವ ಕುರಿತು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದೇನೆ. ಅದು ಗಡಿಪಾರು ವಿಚಾರಣೆಗೆ ಸಂಬಂಧಿಸಿದ್ದಲ್ಲ.ಸುಳ್ಳು ಹೇಳಿಕೆ ನೀಡುವ ಮೂಲಕ ಯಾರೂ ನ್ಯಾಯಾಂಗಕ್ಕೆ ಅವಮಾನ ಮಾಡುವುದಿಲ್ಲ. ಸ್ವತ್ತುಗಳನ್ನು ಇ.ಡಿ ವಶಕ್ಕೆ ಪಡೆದಿರುವುದರಿಂದ ಇವು ನಕಲಿ ಸ್ವತ್ತುಗಳಾಗಿರಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

‘ಇತ್ಯರ್ಥಕ್ಕೆ ಅನುಮತಿ ನೀಡಿದರೆ ಮೊದಲಿಗೆಕಿಂಗ್‌ಫಿಷರ್‌ ಉದ್ಯೋಗಿಗಳಿಗೆ ವೇತನ ನೀಡಲಾಗುತ್ತದೆ’ ಎಂದಿದ್ದಾರೆ.

ಶೀಘ್ರ ಪ್ರಕರಣ ಕೊನೆಗಾಣಿಸಬೇಕು: ತೀರ್ಪು ಸ್ವಾಗತಿಸಿರುವ ಸಿಬಿಐ, ‘ಮಲ್ಯ ಅವರನ್ನು ಶೀಘ್ರ ಭಾರತಕ್ಕೆ ವಾಪಸ್‌
ಕರೆತಂದು, ಬ್ಯಾಂಕ್‌ಗಳಿಗೆ ವಂಚನೆ ಎಸಗಿರುವ ಪ್ರಕರಣವನ್ನು ಕೊನೆಗಾಣಿಸುವ ಭರವಸೆ ಇದೆ’ ಎಂದು ಹೇಳಿದೆ.

‘ಈ ಪ್ರಕರಣದಲ್ಲಿ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಕಾನೂನು ಹಾಗೂ ವಾಸ್ತವಾಂಶಗಳ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಗಡಿಪಾರು ಪ್ರಕ್ರಿಯೆಯಲ್ಲಿ ನಮಗೆ ವಿಶ್ವಾಸವಿತ್ತು’ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದ್ದಾರೆ.

‘ಭಾರತಕ್ಕೆ ಮಹತ್ವದ ದಿನ’: ತೀರ್ಪನ್ನು ಪ್ರಶಂಸಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ಭಾರತಕ್ಕೆ ಮಹತ್ವದ ದಿನ. ಭಾರತಕ್ಕೆ ವಂಚಿಸುವ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಯುಪಿಎ ಆಡಳಿತಾವಧಿಯಲ್ಲಿ ಲಾಭ ಪಡೆದುಕೊಂಡ ವಂಚಕರನ್ನು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ವಿಚಾರಣೆ ಎದುರಿಸುವಂತೆ ಮಾಡಲಾಗುತ್ತಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮುಂದಿನ ನಡೆ ಏನು?
ಅರ್ಬುಥ್ನಾಟ್ ಅವರತೀರ್ಪು ಪ್ರಶ್ನಿಸಿ ಲಂಡನ್‌ ಹೈಕೋರ್ಟ್‌ನಲ್ಲಿಮೇಲ್ಮನವಿ ಸಲ್ಲಿಸಲು ಎರಡೂ ಪಕ್ಷಗಳಿಗೆ 14 ದಿನಗಳ ಅವಕಾಶವಿದೆ. ವಿದೇಶಾಂಗ ಸಚಿವರ ನಿರ್ಣಯವನ್ನು ಸಹ ಹೈಕೋರ್ಟ್‌ನಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಶ್ನಿಸಬಹುದಾಗಿದೆ.

ಕೇಂದ್ರಕ್ಕೆ ಗೆಲುವು?
ಮಲ್ಯ ಗಡಿಪಾರಿನಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಗೆಲುವು ದೊರಕಿದಂತಾಗುತ್ತದೆ.

ಉದ್ಯಮಿಗಳು ದೇಶ ತೊರೆದು ಹೋಗಲು ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈಚೆಗಿನ ವರ್ಷಗಳಲ್ಲಿ ಬ್ಯಾಂಕ್‌ಗಳಿಗೆ ದೊಡ್ಡ ಮೊತ್ತದ ಸಾಲ ಮರುಪಾವತಿಸದೆ ವಂಚಿಸಿ ದೇಶ ಬಿಟ್ಟುಹೋದವರನ್ನು ವಾಪಸ್‌ ಕರೆಸಿ ವಿಚಾರಣೆಗೆ ಒಳಪಡಿಸುವಂತೆ ರಾಜಕೀಯ ಪಕ್ಷಗಳು ಪ್ರಧಾನಿ ಮೇಲೆ ಒತ್ತಡ ಹೇರುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT