ನವದೆಹಲಿ: ಕೋರಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು–ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 238 ಮಂದಿ ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ.
‘ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು’ ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
‘ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೈಯಪ್ಪನಹಳ್ಳಿಯಿಂದ ಹೊರಟಿದ್ದ ಹೌರಾ ಎಕ್ಸ್ಪ್ರೆಸ್
ಬೆಂಗಳೂರು: ಒಡಿಶಾದ ಬಹನಾಗಾ ರೈಲು ನಿಲ್ದಾಣ ಬಳಿ ರೈಲುಗಳು ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೌರಾಕ್ಕೆ ಹೊರಟಿದ್ದ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ. ರಾಜ್ಯದವರೂ ಇರುವ ಶಂಕೆಯಿದೆ.
ಬೈಯಪ್ಪನಹಳ್ಳಿಯಿಂದ ಹೊರಟಿದ್ದ ರೈಲು, ಕೆ.ಆರ್. ಪುರ ಹಾಗೂ ಬಂಗಾರಪೇಟೆ ನಿಲ್ದಾಣ ಮಾರ್ಗವಾಗಿ ಆಂಧ್ರಪ್ರದೇಶ ಪ್ರವೇಶಿಸಿ ಹೌರಾದತ್ತ ಹೊರಟಿತ್ತು. ಇದೇ ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಕರ್ನಾಟಕದ ಪ್ರಯಾಣಿಕರಿದ್ದರು. ಜೊತೆಗೆ, ಬೆಂಗಳೂರಿನಲ್ಲಿ ನೆಲೆಸಿದ್ದ ಉತ್ತರ ಪ್ರದೇಶ ಕಾರ್ಮಿಕರೂ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಇದೆ. ಆದರೆ, ಯಾರೊಬ್ಬರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಗೊತ್ತಾಗಿಲ್ಲ.
ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದವರು ಅಥವಾ ಕುಟುಂಬದ ಸದಸ್ಯರು ಸಹಾಯವಾಣಿಗೆ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 080–22942666, 080–22871291 (ಬೆಂಗಳೂರು ರೈಲ್ವೆ ನಿಯಂತ್ರಣ ಕೊಠಡಿ) ಹಾಗೂ ಒಡಿಶಾದ 08249591559, 67822262286.
ಇವನ್ನೂ ಓದಿ
Odisha Train Tragedy: ಸಂತ್ರಸ್ತರಿಗೆ ಪ್ರಧಾನಿ, ರೈಲ್ವೆಯಿಂದ ಪ್ರತ್ಯೇಕ ಪರಿಹಾರ
Helpline: ಒಡಿಶಾದಲ್ಲಿ ಭೀಕರ ರೈಲು ದುರಂತ- ಅಧಿಕೃತ ಸಹಾಯವಾಣಿಗಳ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.